ನವದೆಹಲಿ: 2005ರ ಅಂತರಿಕ್ಷ್-ದೇವಾಸ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಕಾಂಗ್ರೆಸ್ನ ಅಧಿಕಾರ ದುರ್ಬಳಕೆಗೆ ಪುರಾವೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2005ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಾಣಿಜ್ಯ ವಿಭಾಗ ಅಂತರಿಕ್ಷ್ ಮತ್ತು ಬೆಂಗಳೂರು ಮೂಲದ ಸ್ಟಾರ್ಟಪ್ ದೇವಾಸ್ ಮಲ್ಟಿಮೀಡಿಯಾ ನಡುವೆ ಉಪಗ್ರಹ ಒಪ್ಪಂದವಾಗಿತ್ತು. ಆದರೆ ಕಾರಣಾಂತರಗಳಿಂದ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಆದರೆ ಸೋಮವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಅಂತರಿಕ್ಷ್ ಮತ್ತು ದೇವಾಸ್ ನಡುವಿನ ದಶಕಗಳ ಕಾನೂನು ಹೋರಾಟ ಕೊನೆಗೊಂಡಿತು. ದೇವಾಸ್ ಮಲ್ಟಿಮೀಡಿಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಹೇಗಿರುತ್ತೆ – ಇಲ್ಲಿದೆ ವಿವರ
ಇದು ಭಾರತದ ಜನರಿಗೆ ಹಾಗೂ ದೇಶದ ವಿರುದ್ಧ ಮಾಡಿದ ವಂಚನೆ. ಅಂತರಿಕ್ಷ್-ದೇವಾಸ್ ಒಪ್ಪಂದದಲ್ಲಿನ ವಂಚನೆಯು ಸ್ಪಷ್ಟವಾಗಿತ್ತು. ಸುಪ್ರೀಂ ಕೋರ್ಟ್ನ ಆದೇಶವು ಕಾಂಗ್ರೆಸ್ ಅಧಿಕಾರ ದುರುಪಯೋಗಕ್ಕೆ ಪುರಾವೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಯುಪಿಎ ದುರಾಸೆಯಿಂದ ಮಾಡಿದ ವಂಚನೆ ಇದಾಗಿದೆ. ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ. ತೆರಿಗೆದಾರರ ಹಣವನ್ನು ಉಳಿಸಲು ನಾವು ಹೋರಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ
ಏನಿದು ವಿವಾದ?
ಅಂತರಿಕ್ಷ್ ಎನ್ನುವುದು ಇಸ್ರೋ ಹಾರಿಸುವ ಉಪಗ್ರಹಗಳಲ್ಲಿನ ಸ್ಲಾಟ್ಗಳನ್ನು ಮಾರ್ಕೆಟಿಂಗ್ ಮಾಡುವ ಸಂಸ್ಥೆ. 2005ರಲ್ಲಿ ಜಿ.ಮಾಧವನ್ ಇಸ್ರೋ ಅಧ್ಯಕ್ಷರಾಗಿದ್ದಾಗ, ಇಸ್ರೋ ಉಡಾವಣೆ ಮಾಡಲು ಉದ್ದೇಶಿಸಿದ್ದ ಜಿಸ್ಯಾಟ್-6 ಮತ್ತು ಜಿಸ್ಯಾಟ್-6ಎ ಉಪಗ್ರಹಗಳ ಶೇ.90 ಟ್ರಾನ್ಸ್ಪಾಂಡರ್ಗಳನ್ನು ದೇವಾಸ್ ಕಂಪನಿಗೆ 12 ವರ್ಷಗಳ ಅವಧಿಗೆ ಲೀಸ್ಗೆ ನೀಡಲು ಒಪ್ಪಂದ ಮಾಡಿಕೊಂಡಿತ್ತು.
ಆದರೆ ಕೆ.ರಾಧಾಕೃಷ್ಣನ್ ಅಧ್ಯಕ್ಷರಾಗಿದ್ದಾಗ ಈ ಒಪ್ಪಂದದ ಮರು ವಿಮರ್ಶೆಗೆ ಆಂತರಿಕ ಸಮಿತಿ ರಚಿಸಲಾಗಿತ್ತು. ಹಣಕಾಸು ಅವ್ಯವಹಾರ, ಸ್ವಹಿತಾಸಕ್ತಿ, ನಿಯಮಪಾಲಿಸದಿರುವುದು ಸೇರಿದಂತೆ ಒಪ್ಪಂದದಲ್ಲಿ ಹಲವು ನ್ಯೂನತೆಗಳಿವೆ ಎಂಬ ವಿಚಾರ ಇದರಿಂದ ತಿಳಿಯಿತು. ಹೀಗಾಗಿ ಒಪ್ಪಂದವನ್ನು ರದ್ದುಪಡಿಸಲಾಯಿತು.