ಮಡಿಕೇರಿ: ಪುರಾತನ ಕಾಲದ ಪಂಚಲೋಹ ಹಾಗೂ ಕಂಚಿನ ವಿಗ್ರಹಗಳು ಸೇರಿದಂತೆ ಕೃಷಿ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿ ತಾಲೂಕಿನ ಮೂಲದ ಆರೋಪಿಗಳಾದ ಲವ, ಮಂಜ, ರೋಹಿತ್ ಎಂಬವರನ್ನು ಬಂಧಿಸಿದ್ದು, ಸುಮಾರು 10,20,000 ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2020ರಲ್ಲಿ ಮಡಿಕೇರಿ ಸಮೀಪದ ಕರ್ಣಗೇರಿ ಗ್ರಾಮದ ಆಶಾಕುಮಾರ್ ಮುಂಬೈ ಅವರ ಮನೆಯಲ್ಲಿದ್ದ ಸುಮಾರು 6.5 ಲಕ್ಷ ಮೌಲ್ಯದ ವಿವಿಧ ಮಾದರಿಯ ಪುರಾತನ ಪಂಚಲೋಹ ಮತ್ತು ಕಂಚಿನ ವಿಗ್ರಹಗಳನ್ನು ಕಳ್ಳತನ ಆಗಿರುವ ಬಗ್ಗೆ 7-10-2020 ರಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು
ಈ ಕುರಿತು ಕೊಡಗು ಎಸ್ ಪಿ ಕ್ಷಮಾ ಮಿಶ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಗ್ಗೋಡ್ಲು ಗ್ರಾಮದಲ್ಲಿ ಕಾಫಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಕಳವು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಬಲೆ ಬೀಸಲಾಯಿತು. ಇದೀಗ ಲಕ್ಷಾಂತರ ಮೌಲ್ಯದ ವಿಗ್ರಹಗಳು ಸೇರಿದಂತೆ ಕೃಷಿ ಚಟುವಟಿಕೆಗೆ ಬಳಸುವ ಸುಮಾರು 3 ಲಕ್ಷ ಮೌಲ್ಯದ ಯಂತ್ರೋಪಕರಣಗಳು, 20 ಸಾವಿರ ಮೌಲ್ಯದ ಕಾಫಿ ಬೀಜಗಳನ್ನು ಮತ್ತು ಕಳವು ಮಾಡಲು ಬಳಸುತ್ತಿದ್ದ ಕೆ.ಎ.12 ಎಂಎ 5890 ಓಮ್ನಿ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಂಜ್ರಾ ನದಿಗೆ ಬಿಟ್ಟಿದ್ದ ನೀರು ಬಂದ್ – ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು
ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ, ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕರಾದ ರವಿಕಿರಣ್, ಪಿಎಸ್ ಐ ಸದಾಶಿವ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.