ಬೆಂಗಳೂರು: ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಇನ್ನಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಮೈತ್ರಿಯಲ್ಲಾಗುವ ಪರಿಣಾಮವನ್ನು ಅತೃಪ್ತ ಶಾಸಕರು ಗಮನಿಸುತ್ತಿದ್ದು, ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮೈತ್ರಿಯಲ್ಲಿ ತಳಮಳ ಹೆಚ್ಚಾದಲ್ಲಿ ಇನ್ನೆರಡು ದಿನದಲ್ಲೇ ಇನ್ನಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇನ್ನೂ ಇಬ್ಬರು ಶಾಸಕರು ರಾಜೀನಾಮೆ ನೀಡುವ ಕುರಿತು ಮೈತ್ರಿ ನಾಯಕರಿಗೆ ಸುಳಿವು ದೊರೆತಿದ್ದು, ರಾಜೀನಾಮೆಗೆ ಸಿದ್ಧವಾಗಿರುವ ಅತೃಪ್ತರ ಓಲೈಕೆಗೆ ದೋಸ್ತಿಗಳು ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಏನೂ ಅಪಾಯ ಇಲ್ಲ ಎಂಬುದನ್ನು ತೋರಿಸಿಕೊಳ್ಳುವ ಮೂಲಕ ಇತರ ಶಾಸಕರಲ್ಲಿ ಧೈರ್ಯ ತುಂಬಲು ಮೈತ್ರಿ ನಾಯಕರು ಮುಂದಾಗಿದ್ದು, ಜೊತೆಯಲ್ಲೇ ಅತೃಪ್ತ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮನವೊಲಿಕೆ ಕಾರ್ಯಕ್ಕೂ ದೋಸ್ತಿಗಳು ಕೈಹಾಕಿದ್ದಾರೆ. ಪುನಃ ಚುನಾವಣೆ ಎದುರಿಸಲು ಇಷ್ಟವಿಲ್ಲದ ಅತೃಪ್ತ ಶಾಸಕರು ರಾಜೀನಾಮೆಯನ್ನು ಬ್ಲಾಕ್ ಮೇಲ್ ಅಸ್ತ್ರವಾನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅತೃಪ್ತರ ಬ್ಲಾಕ್ ಮೇಲ್ಗೆ ಸರ್ಕಾರ ಮಣಿಯುತ್ತಾ? ಅತೃಪ್ತರೇ ದೋಸ್ತಿ ನಾಯಕರನ್ನು ಮಣಿಸುತ್ತಾರಾ? ಎಂಬುದೇ ಕೂತುಹಲ ಮೂಡಿಸಿದೆ.
ರಮೇಶ್ ಜಾರಕಿಹೊಳಿ ನಿನ್ನೆ ರಾಜೀನಾಮೆ ನೀಡಿದ್ದರು. ಇಂದು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಮಂಗಳವಾರ ಮಧ್ಯಾಹ್ನದವರೆಗೆ ಜಾರಕಿಹೊಳಿ ಬೆಂಗಳೂರಿಗೆ ಬಂದಿಲ್ಲ. ಹೀಗಾಗಿ ಇಂದು ಬೆಂಗಳೂರಿಗೆ ಬರುತ್ತಾರಾ ಅಥವಾ ಇಲ್ಲವೋ ಎನ್ನುವುದು ಸದ್ಯದ ಕುತೂಹಲವಾಗಿದೆ.