ರಾಯಚೂರು: ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐದು ಜನ ಮೃತಪಟ್ಟ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಅಪಘಾತ ನಡೆದಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ಪಿಲಗುಂಡ ಬಳಿ ಕ್ರೂಸರ್ ವಾಹನ ಪಲ್ಟಿಯಾಗಿ ಐದು ಜನ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅರಕೇರಾ ಸರ್ಕಾರಿ ಆಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಗಾಯಾಳುಗಳನ್ನ ದಾಖಲಿಸಲಾಗಿದೆ.
ಮೃತರನ್ನು ಬಸವರಾಜ,(35) , ಪಾಂಡುರಂಗ (13), ಮುತ್ತಣ್ಣ (35) ಹಾಗೂ ಅಯ್ಯಣ್ಣ(34) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ: ಲಾರಿ-ಕಾರು ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ
ಮೃತರೆಲ್ಲಾ ದೇವದುರ್ಗ ತಾಲೂಕಿನ ಅರಕೇರಾ ಹಾಗೂ ಪಿಲಗುಂಡಾ ಗ್ರಾಮದವರಾಗಿದ್ದಾರೆ. ದೇವದುರ್ಗದಿಂದ ಸಿರವಾರ ಕಡೆಗೆ ಪ್ರಯಾಣಿಕರನ್ನ ಕರೆದ್ಯೊಯ್ಯುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಘಟನೆ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಎರಡು ಅಪಘಾತಗಳಿಂದ ಒಟ್ಟು 10 ಜನ ಸಾವನ್ನಪ್ಪಿದ್ದಾರೆ.