ಬೆಂಗಳೂರು: ಲಿಫ್ಟ್ನಲ್ಲಿ ನಾಯಿಮರಿ ಕೊಂದಿದ್ದ ಮನೆಕೆಲಸದಾಕೆ ಮೇಲೆ ಇದೀಗ ಮತ್ತೊಂದು ಎಫ್ಐಆರ್ (FIR) ದಾಖಲಾಗಿದೆ. ತಾನಿದ್ದ ಮನೆಯಲ್ಲೇ 50 ಗ್ರಾಂ ಚಿನ್ನ ಹಾಗೂ ವಜ್ರದ ಉಂಗುವೊಂದನ್ನು ಕಳ್ಳತನ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.
ಬೆಂಗಳೂರಿನ (Bengaluru) ಬಾಗಲೂರಿನ (Bagaluru) ಅಪಾರ್ಟ್ಮೆಂಟ್ವೊಂದರಲ್ಲಿ ಲಿಫ್ಟ್ನಲ್ಲಿ ನಾಯಿಮರಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ಪುಷ್ಪಲತಾ ಮೇಲೆ ಮನೆ ಮಾಲೀಕರಾದ ರಾಶಿಕಾ ಚಿನ್ನ ಕಳ್ಳತನ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.ಇದನ್ನೂ ಓದಿ: Bengaluru | ಲಿಫ್ಟ್ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಂದಿದ್ದ ಕೆಲಸದಾಕೆ ಅರೆಸ್ಟ್
ನ.2ರಂದು ಮನೆಯ ವಾರ್ಡ್ರೋಬ್ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಾಣೆಯಾಗಿತ್ತು. ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ, ಒಂದು ಉಂಗುರ ಹಾಗೂ ಒಂದು ವಜ್ರದ ಉಂಗುರ ಕಳುವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಕೆಲಸದಾಕೆ ಪುಷ್ಪಲತಾ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಆಕೆ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.
ಯುವತಿ ರಾಶಿಕಾ ಕಾಲೇಜಿಗೆ ಹೋದಾಗ ಪುಷ್ಪಲತಾ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಇದೇ ಸಮಯದಲ್ಲಿ ಡ್ರಾಯರ್ನಲ್ಲಿಟ್ಟಿದ್ದ ಚಿನ್ನಾಭರಣವನ್ನು ಕದ್ದು, ತಾನು ಮಲಗಿಕೊಳ್ಳುವ ಮಂಚದ ಕೆಳಗೆ ಬಚ್ಚಿಟ್ಟಿದ್ದಳು. ಕಳ್ಳತನವೆಸಗಿದ ಬಳಿಕ ಮನೆಯಲ್ಲಿದ್ದ ನಾಯಿಮರಿಯನ್ನು ಸಾಯಿಸಿದ್ದಳು ಎಂದು ತಿಳಿದುಬಂದಿದೆ.
ಬಾಗಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಲಿಫ್ಟ್ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಂದ ಮಹಿಳೆ – ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

