ಶಿವಮೊಗ್ಗ: ಇತ್ತೀಚೆಗೆ ಮನೆಯೊಳಗೆ ಭೂಮಿಯಡಿ ನಾಗನ ಕಲ್ಲು ಪತ್ತೆ ಹಚ್ಚಿ ಸುದ್ದಿಯಾಗಿದ್ದ ಜಿಲ್ಲೆಯ ತೀರ್ಥಹಳ್ಳಿ ನಾಗಪಾತ್ರಿ ನಾಗರಾಜಭಟ್ಟರು ಇಂದು ಮತ್ತೊಂದು ಸವಾಲು ಹಾಕಿದ್ದಾರೆ.
ಕಳೆದ ಶನಿವಾರ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಮನೆಯ ವರಾಂಡ್ ದಲ್ಲಿ ಆರು ಅಡಿ ಒಳಗೆ ಇದ್ದ ನಾಗ ದೇವರ ವಿಗ್ರಹ ತೆಗೆದಿದ್ದರು. ದಿವ್ಯಶಕ್ತಿಯಿಂದ ಆ ವಿಗ್ರಹವನ್ನು ತೆಗೆದಿದ್ದಾಗಿ ಇದನ್ನು ವರ್ಣಿಸಲಾಗಿತ್ತು. ಆದರೆ ಈ ಘಟನೆ ಬಗ್ಗೆ ನಾಗಪಾತ್ರಿ ನಾಗರಾಜ ಭಟ್ಟರ ದೈವಿಶಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಭಾರೀ ಚರ್ಚೆಗೆ ಗ್ರಾಸವಾಯ್ತು ಮನೆಯೊಳಗೆ ಪತ್ತೆಯಾದ ನಾಗ ವಿಗ್ರಹ
ಈಗ ಮಾಧ್ಯಮಗಳ ಮುಂದೆಯೇ ನಾಗಶಕ್ತಿಯ ಪವಾಡ ಬಯಲು ಮಾಡಲು ಪ್ರಸಿದ್ಧ ನಾಗಪಾತ್ರಿ ನಾಗರಾಜಭಟ್ಟರು ಮುಂದಾಗಿದ್ದಾರೆ. ಇಂದು ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಸಮೀಪದ ಸ್ಥಳವೊಂದರಲ್ಲಿ ನಾಗಶಕ್ತಿ ಇದೆ. ಆ ಜಾಗದ ಬಗ್ಗೆ ಮಾಧ್ಯಮಗಳಿಗೆ ಮೊದಲು ಮಾಹಿತಿ ನೀಡುತ್ತೇನೆ. ನಿಮ್ಮ ಸಮ್ಮುಖದಲ್ಲೇ ಉತ್ಖನನ ನಡೆಯಲಿ. ನನಗಿರುವ ದೈವ ಬಲದ ಸುಳ್ಳೋ- ಸತ್ಯವೋ ಎಂಬುದು ನಿರ್ಧಾರ ಆಗಲಿ ಎಂದು ಸ್ವಯಂ ಪರೀಕ್ಷೆಗೆ ಸಜ್ಜಾಗಿದ್ದಾರೆ.
ನಮಗೆ ಆಗದವರು ಸಹಿಸಲಾಗದೇ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ನಾನೇ ಅಲ್ಲಿ ತಂದು ಇಟ್ಟಿದ್ದೇನೋ, ಇಲ್ಲವೋ ಮಾಧ್ಯಮಗಳ ಮೂಲಕವೇ ನೋಡಲಿ ಎಂದು ನಾಗರಾಜ್ ಅವರು ಹೇಳಿದ್ದಾರೆ.
ಶುಕ್ರವಾರ ನಾಗರಾಜ್ ಭಟ್ ಅವರು, ತೀರ್ಥಹಳ್ಳಿ ತಾಲೂಕಿನ ಗರ್ತಿಕೆರೆ ಮಠದಲ್ಲಿ ನಾಗಾರಾಧನೆಯ ಕೇಂದ್ರ ಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದರು. ಶ್ರೀಗಳ ಆಶೀರ್ವಾದ ಪಡೆದ ಮರುದಿನವೇ ಇನ್ನೊಂದು ಪವಾಡ ತೋರಿಸಲು ಸಜ್ಜಾಗಿದ್ದಾರೆ. ಇದು ಆಸ್ತಿಕರು ಹಾಗೂ ನಾಸ್ತಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv