ಕನ್ನಡ ಸಿನಿಮಾ ರಂಗಕ್ಕೆ ಅತೀ ಹೆಚ್ಚು ಬಾಲಿವುಡ್ ನಟಿಯರನ್ನು ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ರವಿಚಂದ್ರನ್ಗೆ ಸಲ್ಲುತ್ತದೆ. ಇದೀಗ ಮತ್ತೆ ರವಿಚಂದ್ರನ್ ಸಿನಿಮಾದಲ್ಲಿ ಹಿಂದಿ ನಟಿಯು ಕಾಣಿಸಿಕೊಂಡಿದ್ದು, ಇಂದು ನಡೆದ ಮುಹೂರ್ತ ಸಮಾರಂಭದಲ್ಲೂ ಅವರು ಹಾಜರಿದ್ದರು. ರವಿಚಂದ್ರನ್ ನಟನೆಯ ಗೌರಿ ಹೆಸರಿನ ಸಿನಿಮಾಗೆ ಇಂದು ಬೆಂಗಳೂರಿನಲ್ಲಿ ಮುಹೂರ್ತ ನಡೆದಿದ್ದು, ನಟಿ ಬರ್ಖಾ ಸೇನ್ ಗುಪ್ತಾ ಕೂಡ ಆಗಮಿಸಿದ್ದಾರೆ.
ಅನೀಶ್ ಅನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಕಡಿಮೆ ಪಾತ್ರಗಳ ಮೂಲಕ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಕೇವಲ ಮೂರೇ ಮೂರು ಪ್ರಮುಖ ಪಾತ್ರಗಳು ಸಿನಿಮಾದಲ್ಲಿದ್ದು, ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ದಾಂಡೇಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್ಗೆ ಪ್ಯಾರ್
ಮುಹೂರ್ತದ ನಂತರ ಮಾತನಾಡಿದ ರವಿಚಂದ್ರನ್, ‘ಇದು ಹೊಸ ಕಾಲಘಟ್ಟ. ಹೊಸ ಹೊಸ ಕಥೆಗಳು ಬರುತ್ತಿವೆ. ಒಂದೊಳ್ಳೆ ಕಥೆ ಸಿಕ್ಕಾಗ ಇಲ್ಲ ಅನ್ನುವುದಕ್ಕೆ ಆಗಲಿಲ್ಲ. ಹೊಸ ವರ್ಷದ ಶುರುವಿನಲ್ಲೇ ಹೊಸ ರೀತಿಯ ಸಿನಿಮಾ ಸಿಕ್ಕಿದೆ. ಖುಷಿ ಆಗುತ್ತಿದೆ’ ಎಂದಿದ್ದಾರೆ. ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶಿವರಾಜ್ ಕುಮಾರ್ ಚಾಲನೆ ನೀಡಿದ್ದಾರೆ. ಮುಂದಿನ ವಾರದಿಂದ ಚಿತ್ರತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ.