ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ‘ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ನಲ್ಲಿ ‘ತಾರಿಣಿ’ (Tarini) ಚಿತ್ರದ ಅಭಿನಯಕ್ಕೆ ಮಮತಾ ರಾಹುತ್ (Mamata Rahut) ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದರೇ ಮತ್ತೊಂದು ‘ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್’ ಕೂಡ ಬಂದಿದೆ. ಒಟ್ಟು ಎರಡು ಪ್ರಶಸ್ತಿಗಳನ್ನು ತಾರಿಣಿ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ. ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರಶಸ್ತಿಗಳಿಸುತ್ತಿದೆ. ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಬಂಡವಾಳ ಹೂಡಿ ಒಂದು ಮುಖ್ಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.
ರಾಜಸ್ಥಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಮತಾ ರಾಹುತ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿರುವುದು ಇಡೀ ತಂಡಕ್ಕೆ ಖುಷಿ ತಂದಿದೆ, ಗರ್ಭಿಣಿಯೊಬ್ಬಳ ಕಥೆಯಾಧಾರಿತ ಈ ಸಿನಿಮಾಗೆ ಮಮತಾ ರಾಹುತ್ ಕೂಡ ನೈಜ ಗರ್ಭಿಣಿಯಾಗಿ ಮನೋಜ್ಞವಾಗಿ ಅಭಿನಯಿದ್ದಾರೆ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಕಷ್ಟ ಎನಿಸಿದರೂ ಅದನ್ನು ಯಾರ ಬಳಿಯೂ ಹೇಳಿಕೊಳ್ಳದೆ ಚಿತ್ರೀಕರಣ ಮಾಡಲು ಸಂಪೂರ್ಣ ಸಹಕಾರ ನೀಡಿ, ದೃಶ್ಯ ಕಟ್ಟುವಲ್ಲಿ ಧೈರ್ಯ ತೋರಿದರು. ಅವರು ಗರ್ಭಿಣಿಯಾದ 7ನೇ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸಿ ಒಂಬತ್ತನೇ ತಿಂಗಳು ತುಂಬಿದಾಗಲೂ ಚಿತ್ರೀಕರಣ ಮಾಡುತ್ತಲೇ ಇದ್ದೆವು. ಮಗು ಹುಟ್ಟುವ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಅವರದೇ ಮಗುವನ್ನು ಚಿತ್ರಿಸಿಕೊಂಡಿದ್ದು ಮಾತ್ರ ಬೆಸ್ಟ್ ಮೆಮೊರಿ. ನೈಜತೆಗೆ ಒತ್ತು ನೀಡುವುದು ಮುಖ್ಯ ಉದ್ದೇಶವಾಗಿದ್ದರಿಂದ ಎಲ್ಲವೂ ಅದ್ಭುತ ಎನಿಸಲು ಸಹಕಾರಿಯಾಗಿದೆ ಎಂದು ನಿರ್ದೇಶಕರು ಸ್ಮರಿಸಿದ್ದಾರೆ.
ಅಯೋಧ್ಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಸಾಮಾಜಿಕ ಚಿತ್ರ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್, ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಇಂಡೋಗ್ಮಾ ಫೆಸ್ಟಿವಲ್ ಅವಾರ್ಡ್, ಫ್ರಾನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಗೋಲ್ಡನ್ ಜ್ಯೂರಿ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಉತ್ತರ ಪ್ರದೇಶದ ಗ್ಲೋಬಲ್ ತಾಜ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಮೊಕ್ಖೋ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್, ಮಧ್ಯಪ್ರದೇಶದ ವಿಂಧ್ಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಮುಂಬೈ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ನ್ಯೂಯಾರ್ಕ್ ಫಿಲ್ಮ್ ಅವಾರ್ಡ್ ಇನ್ನೂ ಮುಂತಾದ ಚಲನಚಿತ್ರಗಳಲ್ಲಿ ಪ್ರದರ್ಶನಗೊಂಡು ತಾರಿಣಿ ಚಿತ್ರ ಪ್ರಶಸ್ತಿಗೆ ಭಾಜನವಾಗುತ್ತಿದೆ.
ಕರ್ನಾಟಕದ ಕೆಲವು ಭಾಗದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಕುರಿತಾದ ವಿಷಯಗಳು ಎಲ್ಲಾ ಕಡೆ ಪ್ರಚಲಿತವಾಗಿ ಕರುಳ ಬಳ್ಳಿಗೆ ಕೊಳ್ಳಿ ಇಡುವ ಕೆಲಸಗಳು ನಿರಂತರವಾಗಿ ನಡೆದು ಈಗ ಅದು ಬಹಿರಂಗವಾಗಿದ್ದು ಎಲ್ಲರಿಗು ಕಣ್ಣೀರು ಬರಿಸುವ ಸುದ್ದಿಯಾಗಿ ಹೊರಹೊಮ್ಮಿತ್ತು. ನಾವು ಇದೇ ವಿಷಯವನ್ನು ಕೇಂದ್ರೀಕರಿಸಿ ಸರ್ಕಾರದ ಮತ್ತು ಸ್ವಸ್ತ ನಾಗರೀಕ ಸಮಾಜದ ಪ್ರತಿನಿಧಿಯಾಗಿ ಭವಿಷ್ಯದ ಹಿತಚಿಂತನೆಯಿಂದ ಈ ಕಥೆಯನ್ನು ಸಿದ್ದಪಡಿಸಿದ್ದೇವೆ, ಖಂಡಿತ ಇದೊಂದು ಉತ್ತಮ ಚಿತ್ರವಾಗಿ ಎಲ್ಲರ ಗಮನಸೆಳೆದು ಯಶಸ್ವಿಯಾಗುತ್ತದೆ. ಇಂತಹ ವಿಭಿನ್ನ ಪ್ರಯತ್ನಕ್ಕೆ ಕನ್ನಡಿಗರು ಯಾವತ್ತೂ ಕೈಜೋಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ನಾಯಕನಾಗಿ ರೋಹಿತ್ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಅಭಿನಯಿಸಿದ್ದಾರೆ. ಮುಖ್ಯಪಾತ್ರದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮಿಳಾ ಸುಬ್ರಹ್ಮಣ್ಯ, ಸನ್ನಿ, ಶೀಬಾ, ದೀಪಿಕಾ ಗೌಡ, ಕವಿತ ಕಂಬಾರ್, ಮಟಿಲ್ಢಾ ಡಿಸೋಜಾ,ತೇಜಸ್ವಿನಿ, ಅರ್ಚನ ಗಾಯಕ್ವಾಡ್, ಮಂಜು ನಂಜನಗೂಡು, ರಘು ಸಮರ್ಥ್, ಪ್ರಿನ್ಸ್ ಜಿತಿನ್ ಕೋಟ್ಯಾನ್, ಬೇಬಿ ರಿಧಿ, ಬೇಬಿ ನಿಶಿತಾ,ಚೈತ್ರ, ಶ್ವೇತ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ಸಂಯೋಜಿದರೆ, ದೀಪಕ್ ಸಂಕಲನ ಮಾಡಿದ್ದಾರೆ, ಕಲೆ ಬಸವರಾಜ್ ಆಚಾರ್ಯ, ಡಿ.ಐ ಕೆಲಸವನ್ನು ನಿಖಿಲ್ ಕಾರಿಯಪ್ಪ ನಿರ್ವಹಿಸಿದ್ದಾರೆ.