ಚಿತ್ರದುರ್ಗ: ಮುರುಘಾ ಮಠದಿಂದ ನೀಡುವ, 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್ಕುಮಾರ್ ಅವರಿಗೆ ನೀಡುವುದಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇರುನಟ ಹಾಗು ಮಾನವೀಯ ಮೌಲ್ಯದ ಗುಣಗಳಿಗೆ ಹೆಸರಾಗಿರುವ ನಟ ಅಪ್ಪುಗೆ ಮರಣೋತ್ತರ ‘ಬಸವಶ್ರೀ ಪ್ರಶಸ್ತಿ’ಯನ್ನು ನೀಡಲು ಚಿತ್ರದುರ್ಗದ ಮುರುಘಾ ಮಠ ನಿರ್ಧರಿಸಿದೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ ಎನಿಸಿರುವ ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ. ನಗದು ಸೇರಿದಂತೆ ಬಸವಶ್ರೀ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಬರುವ ಬಸವ ಜಯಂತಿ ದಿನ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ
ಪ್ರಶಸ್ತಿ ಪ್ರದಾನ ಸಮಾರಂಭ ಚಿತ್ರದುರ್ಗದ ಮುರುಘಾ ಮಠದಲ್ಲಿರುವ ಅನುಭವ ಮಂಟಪದಲ್ಲಿ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈಗಾಗಲೇ ನಟ ಶಿವರಾಜಕುಮಾರ್ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಅಲ್ಲದೇ ನವೆಂಬರ್ 10ರಂದು ಪುನೀತ್ ಮನೆಗೆ ಮುರುಘಾ ಶ್ರೀಗಳು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಮುರುಘಾ ಶರಣರು ನಿರ್ಧರಿಸಿದ್ದಾರೆ. ಪುನೀತ್ ಕುಟುಂಬದವರೊಂದಿಗೆ ಕೋಟೆನಾಡಿನ ಅನೇಕ ಮಠಾಧೀಶರು, ಪುನೀತ್ ಒಡನಾಡಿಗಳು ಭಾಗಿಯಾಗುವರೆಂದು ಶರಣರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ