ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ನನಗಿಂತ ಹತ್ತು ಪಟ್ಟು ಹೆಚ್ಚು ಉತ್ತಮ ಅಧಿಕಾರಿ ಎಂದು ಎಸ್ಪಿ ರವಿ ಡಿ ಚೆನ್ನಣ್ಣನವರ್ ಹೇಳಿದ್ದಾರೆ. ಎಸ್ಪಿ ಅವರ ಮಾತು ಕೇಳಿ ಅಣ್ಣಾಮಲೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರವಿ ಚೆನ್ನಣ್ಣನವರ್ ಅವರು ಚಿಕ್ಕಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿದ್ಯಾರ್ಥಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ರಾಜೀನಾಮೆ ಕುರಿತು ನಿಮ್ಮ ಅಭಿಪ್ರಾಯ ಏನು ಎಂದು ರವಿ ಅವರ ಬಳಿ ಕೇಳಿದ್ದಾರೆ. ಈ ವೇಳೆ ರವಿ ಅವರು “ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ” ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ‘ನಂದು’ ಪರಿಚಯಿಸಿದ ಅಣ್ಣಾಮಲೈ
ಬಳಿಕ ಮತ್ತೊಬ್ಬ ವಿದ್ಯಾರ್ಥಿ ನಿಮ್ಮಬ್ಬರಲ್ಲಿ ಯಾರು ಗ್ರೇಟ್ ಆಫೀಸರ್ ಎಂದು ರವಿ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರವಿ ಅವರು, “ಎಂದಿಗೂ ನನ್ನ ಸ್ನೇಹಿತ ಕೆ ಅಣ್ಣಾಮಲೈ ಅದ್ಭುತ ಆಫೀಸರ್” ಎಂದು ಉತ್ತರಿಸಿದ್ದಾರೆ. ರವಿ ಚೆನ್ನಣ್ಣನವರ್ ಅವರ ಈ ಮಾತು ಕೇಳಿ ಅಣ್ಣಾಮಲೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ರವಿ ಹೇಳಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್
ಅಣ್ಣಾಮಲೈ ಅವರು ತಮ್ಮ ಟ್ವಿಟ್ಟರಿನಲ್ಲಿ, “ಭಾರತ ದೇಶದಲ್ಲಿ ಸಿವಿಲ್ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಶ್ರೇಷ್ಠರೇ. ಎಲ್ಲಾ ಸರ್ವಶಕ್ತ ನದಿಗಳು ಕೊನೆಗೆ ಒಂದೇ ಜಾಗದಲ್ಲಿ ಸೇರುತ್ತದೆ. ರವಿ ಡಿ ಚನ್ನಣ್ಣನವರ್ ಸರ್ ಹೀಗೆ ಹೇಳಿದ್ದು ಖುಷಿ ತಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ರವಿ ಚನ್ನಣ್ಣವರ್ ಹಾಗೂ ಅಣ್ಣಾಮಲೈ ಅವರು ಎಲ್ಲರ ಹೆಮ್ಮೆ, ನೀವಿಬ್ಬರೂ ಕರ್ನಾಟಕದ ಸಿಂಗಂಗಳು ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಮಿಳುನಾಡಿನವರಾದ ಅಣ್ಣಾಮಲೈ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪ್ರತಿಷ್ಠಿತ ಲಕ್ನೋ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದು, ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. 2011ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2013ರಲ್ಲಿ ಕಾರ್ಕಳ ಎಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್ಪಿ, ಚಿಕ್ಕಮಗಳೂರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.