-ಕುಮಾರಸ್ವಾಮಿ ಗುರುತಿಸಿದ ಜಾಗವೇ ಫೈನಲ್
ರಾಮನಗರ: ಜಿಲ್ಲೆಯಲ್ಲಿಯೇ ನಮ್ಮ ಮಗನ ಮದುವೆ ಮಾಡಬೇಕು ಎನ್ನುವುದು ನನ್ನ ಹಾಗೂ ಕುಮಾರಸ್ವಾಮಿಯವರ ಕನಸು. ಈ ಜನರ ನಡುವೆಯೇ ಪುತ್ರ ನಿಖಿಲ್ನ ಮದುವೆ ಮಾಡಬೇಕು ಎಂದು ಕೊಂಡಿದ್ದೇವು. ಇದೀಗ ಆ ಆಸೆ ಹಿಡೇರುತ್ತಿದೆ. ಕುಮಾರಸ್ವಾಮಿಯವರು ನೋಡಿರುವ ಜಾಗದಲಿಯೇ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಮದುವೆ ಫಿಕ್ಸ್ ಮಾಡಲಾಗುವುದು ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರಿ. ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಪ್ರವಾಸಿ ಮಂದಿರದ ಬಳಿ ನೂತನ ಪ್ರವಾಸಿ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ರಾಮನಗರ- ಚನ್ನಪಟ್ಟಣ ಮಧ್ಯ ಭಾಗದಲ್ಲಿ ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ನಾವು ಇಬ್ಬರು ಸಹ ಮಗನ ಮದುವೆಯನ್ನು ಜನರ ಮಧ್ಯೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ವಿ. ನಮ್ಮ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ ಎಂದರು.
ಈಗಾಗಲೇ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಯವರು ರಾಮನಗರ-ಚನ್ನಪಟ್ಟಣ ಎರಡು ಕ್ಷೇತ್ರಗಳ ನಡುವೆ ಜಾಗ ನೋಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮದುವೆ ಮಾಡಲು ತಯಾರಿ ನಡೆಯುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಮೂರು ಡೇಟ್ ನೀಡಿದ್ದು, ಒಂದನ್ನು ಫೈನಲ್ ಮಾಡುವ ಮೂಲಕ ಮದುವೆ ದಿನಾಂಕ ಫಿಕ್ಸ್ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೇ ನಾವು ಮದುವೆ ಕಾರ್ಯಕ್ರಮವನ್ನು ನಡೆಸಿಕೊಡ್ತೇವೆ ಅವರು ಬೀಗರ ಔತಣ ಕೂಟ ಮಾಡುತ್ತಾರೆ ಎಂದು ಹೇಳಿದರು.
ಈಗಾಗಲೇ ಎಚ್ಡಿ ಕುಮಾರಸ್ವಾಮಿಯವರು ಜಾನಪದ ಲೋಕದ ಪಕ್ಕದ 54 ಎಕರೆ ವಿಶಾಲ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ. ಸೆಂಟ್ರಲ್ ಮುಸ್ಲಿಂ ಅಸೋಶಿಯೇಷನ್ಗೆ ಸೇರಿದ 22 ಎಕರೆ ಹಾಗೂ ಉದ್ಯಮಿಯೊಬ್ಬರ 23 ಎಕರೆ ಜೊತೆಗೆ ಪಕ್ಕದಲ್ಲೇ ಇರುವ ಲೇಔಟ್ ಜಾಗವನ್ನು ಸಹ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನೂ ಈ ಸ್ಥಳ ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ. ಅದ್ದೂರಿ ಸೆಟ್ ನಿರ್ಮಿಸಿ ಮದುವೆ, ಪಾರ್ಕಿಂಗ್, ಔತಣಕೂಟ ನಡೆಸಲು ಸೂಕ್ತ ಸ್ಥಳವಾಗಿದೆ ಎಂದು ಎಚ್ಡಿಕೆಯವರು ಈಗಾಗಲೇ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.