ಕಾರವಾರ: ದೇಶದೆಲ್ಲೆಡೆ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇದ್ದಾರೆ. ಆದರೆ ಪರಿಸರ ಹಾನಿಯಿಂದ ಎಲ್ಲೋ ಅಡಗಿ ಕುಳಿತಿದ್ದ ಪ್ರಾಣಿ, ಪಕ್ಷಿಗಳು ಮತ್ತು ಜಲಚರಗಳು ಈಗ ಹಾಯಾಗಿ ಎಲ್ಲೆಡೆ ಓಡಾಡುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆ, ಹಾವು, ಪಕ್ಷಿಗಳು, ಜಲಚರಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದಲ್ಲಿ ಮಂಜುನಾಥ್ ತ್ರ್ಯಂಬಕ ಹೆಗಡೆಯವರ ತೋಟದಲ್ಲಿ 11 ಅಡಿ ಉದ್ದದ ಕಾಳಿಂಗಸರ್ಪ ಕಾಣಿಸಿಕೊಂಡಿದೆ. ತಕ್ಷಣ ಶಿರಸಿಯ ಉರಗತಜ್ಞ ಮನು ಬಂದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.
ಹಳಿಯಾಳ ಮತ್ತು ಯಲ್ಲಾಪುರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ಸುತ್ತಾಡುವ ಮೂಲಕ ಜನರ ಕ್ಯಾಮರಾದಲ್ಲಿ ಸೆರೆಯಾಗಿದ್ದಾವೆ. ಇತ್ತ ಅಂಕೋಲದಲ್ಲಿ ನಗರಕ್ಕೆ ಬಾರದ ಕಾಡಿನಲ್ಲೇ ಹೆಚ್ಚು ಇರುವ ಹಾರ್ನ್ ಬಿಲ್ ಪಕ್ಷಿಗಳು ಸದ್ದಿಲ್ಲದ ನಗರ ಪ್ರವೇಶ ಮಾಡಿ ಮನೆಗಳ ಮೇಲೆ ವಿಹರಿಸುತ್ತಿವೆ.
ಅರಬ್ಬಿ ಸಮುದ್ರದಲ್ಲೂ ಕೂಡ ಮೀನುಗಾರಿಕೆ ಬಂದ್ ಆಗಿದ್ದರಿಂದ ಬೃಹದಾಕಾರದ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿವೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕ್ಯಾಮರಾಕ್ಕೆ ತಿಮಿಂಗಿಲಗಳು ಸ್ಪಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯ ಸೆರೆಯಾಗಿದೆ.