ಮೈಸೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋದ ಪ್ರಸಂಗ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ನಡೆದಿದೆ.
ಹೌಸಿಂಗ್ ಸೊಸೈಟಿಗಳಿಗೆ ಎನ್ಓಸಿ ಕೊಡುವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಮತ್ತು ಸಂದೇಶ್ ನಾಗರಾಜ್ ಅವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಪರಸ್ಪರ ಏಕವಚನದಲ್ಲೇ ನಿಂದಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಮೂಡಾ ಅಧಿಕಾರಿಗಳ ಮುಂದೆ ಹೀನಾಮಾನವಾಗಿ ಬೈಯ್ದಾಡಿಕೊಂಡಿದ್ದಾರೆ.
ಆಗಿದ್ದೇನು?:
ಸರ್ಕಾರದ ಆದೇಶದಂತೆ ಎನ್ಓಸಿ ಇವತ್ತೇ ಕೊಡಿ ಎಂದು ಮರಿತಿಬ್ಬೇಗೌಡ ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸಂದೇಶ್ ನಾಗರಾಜ್ ಸೇರಿದಂತೆ ಹಲವು ಶಾಸಕರ ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಇದ್ದಕ್ಕಿಂದಂತೆ ಸಂದೇಶ್ ನಾಗರಾಜ್ ಮತ್ತು ಮರಿತಿಬ್ಬೇಗೌಡ ನಡುವೆ ಜಗಳ ಶುರುವಾಯಿತು. ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿದರು. ಅಷ್ಟೇ ಅಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.
ವಿಧಾನ ಪರಿಷತ್ ಸದಸ್ಯರ ಮಧ್ಯೆ ಜಗಳ ತಾರಕಕ್ಕೆ ಏರುತ್ತಿದ್ದಂತೆ ಮೂಡಾ ಅಧ್ಯಕ್ಷರು ಸಭೆಯನ್ನು ಮುಂದೂಡಿದ್ದಾರೆ. ವಿಧಾನ ಪರಿಷತ್ ಸದಸ್ಯರ ನಡೆ ಹಾಗೂ ವರ್ತನೆಯ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.