ಆನೇಕಲ್: ಕರ್ನಾಟಕ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕನಿಕೋಟೆ, ಸೂಳಗಿರಿ ಅರಣ್ಯ ಪ್ರದೇಶದಲ್ಲಿ 3 ತಂಡಗಳಲ್ಲಿ ಸುಮಾರು 69ಕ್ಕೂ ಹೆಚ್ಚು ಆನೆಗಳು ಹಲವು ದಿನಗಳಿಂದ ಬೀಡು ಬಿಟ್ಟ ಪರಿಣಾಮ ಗ್ರಾಮಸ್ಥರು ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಪ್ರತಿ ವರ್ಷದಂತೆ ಅರಣ್ಯದಂಚಿನ ತೋಟದ ಹೊಲಗಳಿಗೆ ಆಹಾರವನ್ನು ಅರಸಿ ಬರುವ ಆನೆಗಳ ಹಿಂಡು ಈ ವರ್ಷವು ಕೂಡ ಆಗಮಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆನೆಗಳನ್ನು ನೋಡಲು ಬರುವ ಗ್ರಾಮದ ಜನರು ಆನೆಗಳ ಗುಂಪನ್ನು ಗಾಬರಿ ಪಡಿಸುತ್ತಾ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದರಿಂದ ಹೆದರಿ ಆನೆಗಳು ನಾಡಿನತ್ತ ಲಗ್ಗೆಯಿಟ್ಟು ಮತ್ತಷ್ಟು ಬೆಳೆ ನಾಶ ಮಾಡುತ್ತಿವೆ.
ಆನೆಗಳನ್ನು ನೋಡಲು ಹಾಗೂ ಓಡಿಸಲು ಸಾಕಷ್ಟು ಜನ ಸೇರುತ್ತಿದ್ದು, ಜನರನ್ನು ಕಂಡ ಆನೆಗಳು ದಾಳಿ ಮಾಡಲು ಮುಂದಾಗುತ್ತಿವೆ. ಅರಣ್ಯ ಅಧಿಕಾರಿಗಳು ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಜನರೇ ಆನೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ನಿಯಂತ್ರಿಸಲು ಕೂಡ ಅರಣ್ಯ ಸಿಬ್ಬಂದಿ ಪರದಾಟ ನಡೆಸುತ್ತಿದ್ದಾರೆ.
ಈ ವರ್ಷ ಕಾಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಪ್ರತಿ ದಿನ ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮೊದಲೇ ಬರಗಾಲದಿಂದ ರೈತರ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಫಸಲು ನೀಡಿದ್ದು, ಅಳಿದುಳಿದ ಬೆಳೆಯು ಕೂಡ ಕಣ್ಣ ಮುಂದೆಯೇ ನಾಶವಾಗುತ್ತಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv