ಆನೇಕಲ್: ಅವರಿಬ್ಬರು ಸ್ನೇಹಿತರು, ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಒಬ್ಬಾತ, ಇನ್ನೊಬ್ಬ ಸ್ನೇಹಿತ ತರಕಾರಿ ವ್ಯಾಪಾರ ಮಾಡುತ್ತಿದ್ದ. ಗುರುವಾರ ಮಧ್ಯಾಹ್ನ ಇಬ್ಬರೂ ಮನೆಯಿಂದ ಹೊರಟಿದ್ದರು. ಆದರೆ ಮನೆಯಿಂದ ಹೋದವರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಹೆಣವಾಗಿ ಹೋಗಿದ್ದಾರೆ. ಜೂಜಾಟ, ಬಡ್ಡಿ ವ್ಯಾಪಾರವೇ ಇವರಿಬ್ಬರ ಪ್ರಾಣ ಹೋಗೋದಕ್ಕೆ ಕಾರಣವಾಯ್ತಾ.? ಅಥವಾ ಇನ್ನೂ ಬೇರೆ ಕಾರಣ ಇದೆಯಾ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಕೊಲೆ ನಡೆದು ಹೋಗಿದೆ. ಟಿವಿಎಸ್ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಅತ್ತಿಬೆಲೆ ನಿವಾಸಿ ಫೈನಾನ್ಸಿಯರ್ ಆಗಿರುವ ದೀಪಕ್(45) ಹಾಗೂ ತರಕಾರಿ ವ್ಯಾಪಾರಿ ಮಾಯಸಂದ್ರದ ಭಾಸ್ಕರ್ (28) ಅವರ ಕೊಲೆಯಾಗಿದೆ.
ದೀಪಕ್ ಸಣ್ಣ ಮಟ್ಟದ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ತಮಿಳುನಾಡು ಮೂಲದ ದೊರೆ ಎಂಬವನಿಗೆ 20 ಸಾವಿರ ಸಾಲ ನೀಡಿದ್ದ. ಸಾಲ ಹಿಂದಿರುಗಿಸದ ಕಾರಣ ಭಾಸ್ಕರ್ ಜೊತೆ ದೊರೆ ಊರಿಗೆ ತೆರಳಿ ಅವಾಜ್ ಹಾಕಿ, ಅವನ ಹೀರೋ ಎಕ್ಸ್ಟ್ರೀಮ್ ತೆಗೆದುಕೊಂಡು ಬಂದಿದ್ದ. ನಂತರ ದುಡ್ಡು ಕೊಡೋದಾಗಿ ಹೇಳಿದ ದೊರೆ, ತನ್ನ ಬೈಕ್ ವಾಪಸ್ ಪಡೆಯಲು ಬಂದಾಗ ದೊಡ್ಡ ಜಗಳ ನಡೆದಿದೆ ಎನ್ನಲಾಗಿದೆ.
ಇತ್ತ ಮೊದಲೇ ನಿರ್ಧಾರ ಮಾಡಿಕೊಂಡು ಬಂದಿದ್ದ ದೊರೆ ಹಾಗೂ ಅರುಣ್ ಕಡೆಯ ಆರೇಳು ಮಂದಿ, ರಾಡ್ ದೊಣ್ಣೆಗಳಿಂದ ದೀಪಕ್ ನನ್ನು ಥಳಿಸಿದ್ದಾರೆ. ಇದಕ್ಕೆ ಅಡ್ಡ ಬಂದ ಭಾಸ್ಕರ್ ನನ್ನೂ ಹೊಡೆದಿದ್ದಾರೆ ಅಂತ ಹೇಳಲಾಗ್ತಿದೆ. ಕೇವಲ 20 ಸಾವಿರ ಹಣಕ್ಕೆ ಕೊಲೆ ನಡೆದಿರಬಹುದಾ ಅಥವಾ ಬೇರೆ ಏನಾದರೂ ಕಾರಣಗಳಿವೆಯಾ ಎಂದು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಟೀಲ್ಗೆ ಸೀರೆ ಉಡಿಸಿದ್ರೆ ಆತ ಹೆಂಗಸು ಅಲ್ಲ, ಗಂಡಸು ಅಲ್ಲ: ಬೇಳೂರು ಗೋಪಾಲಕೃಷ್ಣ
ತನ್ನ ಗಂಡ ದೀಪಕ್ ಯಾರ ಜೊತೆಯೂ ಜಗಳ ಮಾಡ್ತಾ ಇರಲಿಲ್ಲ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದರು ಅಂತ ದೀಪಕ್ ಪತ್ನಿ ಸ್ನೇಹ ಕಣ್ಣೀರಿಟ್ಟಿದ್ದಾರೆ. ಇತ್ತ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭಾಸ್ಕರ್, ಇತ್ತೀಚೆಗೆ ಜೂಜಾಡುವ ಚಟ ಮೈಗೂಡಿಸಿಕೊಂಡಿದ್ದ, ಮೊನ್ನೆಯಷ್ಟೇ ತಮಿಳುನಾಡು ಪೊಲಿಸರಿಂದ ಅರೆಸ್ಟ್ ಆಗಿ ಬೇಲ್ ಮೇಲೆ ಹೊರ ಬಂದಿದ್ದ. ಆನೇಕಲ್ ಹೊಸೂರು ಭಾಗದಲ್ಲಿ ನಡೆಯುವ ಇಸ್ಪೀಟು ಅಡ್ಡೆಗಳಲ್ಲಿ ಸಕ್ರಿಯವಾಗಿ ಜೂಜಾಡುತ್ತಿದ್ದ ಭಾಸ್ಕರ್ ಗೆ ದೀಪಕ್ ಆಗಾಗ ಹಣದ ಸಹಾಯ ಮಾಡುತ್ತಿದ್ದ. ಹೀಗಾಗಿಯೇ ಭಾಸ್ಕರ್, ದೀಪಕ್ ಜೊತೆಯೂ ಅವನ ಬಡ್ಡಿ ವ್ಯವಹಾರದಲ್ಲಿ ಸಹಾಯ ಮಾಡ್ತಿದ್ದ.
ಒಟ್ಟಿನಲ್ಲಿ ಇದೀಗ ಜೂಜಾಟಕ್ಕೆ ಬೇಕಾದ ಹಣದ ಆಸೆಗೆ ಮಾರು ಹೋಗಿ ಹೆಣವಾಗಿರುವ ಭಾಸ್ಕರ್, ದೀಪಕ್ ನ ಜಗಳದಲ್ಲಿ ತಾನೂ ಪ್ರಾಣಕಳೆದುಕೊಂಡಿದ್ದಾನೆ.