ಬೆಂಗಳೂರು: ಆನೇಕಲ್ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ಆಪರೇಷನ್ ಹಸ್ತ ಶುರು ಮಾಡಿದ್ದಾರೆ.
ಜೆಡಿಎಸ್ ನಾಯಕ, ಆನೇಕಲ್ ಪುರಸಭಾ ಸದಸ್ಯ ಪದ್ಮನಾಭ್ ಹಾಗೂ ಬಿಜೆಪಿ ಆನೇಕಲ್ ಘಟಕದ ಉಪಾಧ್ಯಕ್ಷ ಶಿವರಾಂ ಅವರನ್ನು ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದರು, ಬಾಯಿಚಪಲಕ್ಕೆ ಮಾತನಾಡುವುದೆಲ್ಲ ನಿಜವಾಗುವುದಿಲ್ಲ. 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪನರು ಹೇಳುತ್ತಾರೆ. ಆದರೆ ನಮ್ಮ ಬಳಿ ಬಿಜೆಪಿಯ 40 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗಲಿದೆಯೇ ಹೊರತು ಮೈತ್ರಿ ಸರ್ಕಾರದಲ್ಲಿ ಆಗುವುದಿಲ್ಲ ಎಂದು ಹೇಳಿದರು.