ಕಲಬುರಗಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿಗಳು ಪೂಜೆಗೆ ಯೋಗ್ಯವಲ್ಲ. ಒಂದು ವೇಳೆ ಕೆತ್ತಿದ್ದರೆ ಅವುಗಳನ್ನು ಪ್ರತಿಷ್ಠಾಪಿಸಬಾರದು ಎಂದು ಶ್ರೀ ರಾಮಸೇನೆ ರಾಜ್ಯ ಗೌರವಾಧ್ಯಕ್ಷ ಹಾಗೂ ಕರುಣೇಶ್ವರ ಮಠದ ಆಂದೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲುಕೋಟೆಯಲ್ಲಿ ಮುಸ್ಲಿಮರು ದೇವರ ಮೂರ್ತಿ ಕೆತ್ತನೆ ವಿಚಾರ ತಿಳಿದಿರಲಿಲ್ಲ. ವಿಶ್ವಕರ್ಮ ಸಮಾಜದವರು ಶಾಸ್ತ್ರೋಕ್ತವಾಗಿ ಮೂರ್ತಿ ಕೆತ್ತನೆ ಮಾಡುತ್ತಾರೆ. ಆದರೆ, ಮುಸ್ಲಿಮರು ಯಾವುದೇ ರೀತಿಯಿಂದ ಶಾಸ್ತ್ರೋಕ್ತವಾಗಿ ಕೆತ್ತನೆ ಮಾಡುವುದಿಲ್ಲ. ಹೀಗಾಗಿ ಮುಸ್ಲಿಮರು ಕೆತ್ತನೆ ಮಾಡೋ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಎಂದರು.
ಒಂದು ವೇಳೆ ಪ್ರತಿಷ್ಠಾಪಿಸಿದರೂ ಆ ಮೂರ್ತಿಗಳಿಂದ ಯಾವುದೇ ಫಲ ಸಿಗುವುದಿಲ್ಲ. ಮುಸ್ಲಿಮರು ಕೆತ್ತಿದ ಮೂರ್ತಿಗಳನ್ನು ಬ್ಯಾನ್ಗೆ ಶ್ರೀರಾಮಸೇನೆ ಬೆಂಬಲ ನೀಡುತ್ತದೆ ಎಂದರು.
ಬಹಳ ಜನರಿಗೆ ಮೇಲಕೋಟೆಯಲ್ಲಿ ಮುಸ್ಲಿಮರಿಂದ ದೇವರ ಮೂರ್ತಿ ಕೆತ್ತನೆ ಬಗ್ಗೆ ತಿಳಿದಿರಲಿಲ್ಲ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಅದನ್ನು ಪ್ರಸ್ತಾಪಿಸಿದ್ದರು. ಬಹಿಷ್ಕಾರಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಟೀಕಿಸಿದರು.
ಇದೇ ವೇಳೆ ಅಲಖೈದಾ ಮುಖ್ಯಸ್ಥ ಅಲ್ ಜವಾಹಿರಿ ಮಂಡ್ಯದ ಮುಸ್ಕಾನ್ ಬೆಂಬಲಿಸಿದ ಪ್ರಕರಣವನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಹೇಳಿದರು. ಇದನ್ನೂ ಓದಿ: ಅಧಿವೇಶನ ಮುಂದೂಡಲು ಸಂಸದರೇ ಮನವಿ ಮಾಡಿದ್ದರು: ಪ್ರಹ್ಲಾದ್ ಜೋಶಿ
ಇಡೀ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾನೆ. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಂಘಟನೆ ಹೋಗಿ ಇಡೀ ಭಾರತಕ್ಕೆ ಎಚ್ಚರಿಕೆ ಕೊಟ್ಟಿದ್ದು, ಭಯಂಕರ ಸ್ಥಿತಿಗೆ ತಲುಪಿದೆ. ಆದ್ದರಿಂದ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಾಯಕರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಬಾರದು. ಭಾರತ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇದನ್ನು ಗಂಭೀರ ತೆಗೆದುಕೊಂಡಿಲ್ಲ. ಪ್ರತಿ ಹಂತದಲ್ಲೂ ಸಹ ಹಿಂದೂ ಸಂಘಟನೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಎಲ್ಲಾ ಸಮುದಾಯಗಳು ಕರ್ನಾಟಕ ಹೈಕೋರ್ಟ್ ಆದೇಶ ಪಾಲಿಸಬೇಕು: ಖರ್ಗೆ