ಕೋಲಾರ: ಭೀಕರ ರಸ್ತೆ ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿಕೋಟ ಕಸ್ತೂರಿ ನಗರದ ಬಳಿ ನಡೆದಿದೆ.
ವಿಕೋಟದ ಯಲ್ಲಾರಂ ಗ್ರಾಮದ ಅಶೋಕ್ (24) ಹಾಗೂ ಅಶ್ವಿನಿ (19) ಮೃತ ನವ ದಂಪತಿ. ಚಿತ್ತೂರುನಿಂದ ಪಲಮನೇರು ಕಡೆಗೆ ಹೊರಟಿದ್ದಾಗ ಘಟನೆ ಸಂಭವಿಸಿದೆ.
ಅಶೋಕ್ ಹಾಗೂ ಅಶ್ವಿನಿ ಚಿತ್ತೂರಿನ ಸಂಬಂಧಿಕರ ಮನೆ ಬಂದಿದ್ದರು. ಚಿತ್ತೂರುನಿಂದ ಪಲಮನೇರ್ ಕಡೆಗೆ ಬೈಕಿನಲ್ಲಿ ಇಂದು ಸಂಜೆ ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಆಯಿಲ್ ಟ್ಯಾಂಕರ್ ಬೈಕ್ಗೆ ಡಿಕ್ಕಿ ಹೊಡೆದಿದ್ದು, ದಂಪತಿ ಹಾರಿ ಕೆಳಗೆ ಬಿದ್ದಿದ್ದಾರೆ. ಅಶೋಕ್ ತಲೆ ಬಲವಾದ ಪಟ್ಟು ಬಿದ್ದು, ಅತಿಯಾದ ರಕ್ತಸ್ರಾವದಿಂದ ರಸ್ತೆ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಅಶ್ವಿನಿ ಎದೆಗೆ, ಮುಖ ಹಾಗೂ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವಿಕೋಟ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಆಯಿಲ್ ಟ್ಯಾಂಕರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.