ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಿರೂಪಕ ಚಂದನ್ ಅವರಿಗೆ ನಟಿ, ನಿರೂಪಕಿ ಅನುಶ್ರೀ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವ ಮೂಲಕ ಚಂದನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
“ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತೆ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು. ನಾನು ಕೂಡ ಇವರ ಅಭಿಮಾನಿ. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ. ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅನುಶ್ರೀ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಚಂದನ್ ನಿರೂಪಕ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಾ, ರಾಜ್ಕುಮಾರ್ ಅವರ ಅಭಿಮಾನಿಯಾಗಿದ್ದ ಚಂದನ್ ರಾಜ್ಕುಮಾರ್ ಅವರ ಕಾರ್ಯಕ್ರಮಗಳಲ್ಲೂ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದಿತ್ತು.
ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಚಂದನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಚಂದನ್ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.