ಕನ್ನಡ ಕಿರುತೆರೆ ಅಂಗಳದ ಸ್ಟಾರ್ ಆಂಕರ್, ಚಿಟಪಟ ಮಾತಿನ ಚಿನಕುರಳಿ ಅನುಶ್ರೀ ಸ್ಯಾಂಡಲ್ವುಡ್ ಅಂಗಳಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.
ಉಪ್ಪು ಹುಳಿ ಖಾರ ಸಿನಿಮಾ ನಂತರ ಬೇರೆ ಯಾವುದೇ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಡದೇ ಕಿರುತೆರೆ ನಿರೂಪಣೆಯಲ್ಲಿಯೇ ಬ್ಯುಸಿಯಾಗಿರುವ ಅನುಶ್ರೀ ಹೊಸ ವರ್ಷದ ಆರಂಭದಲ್ಲಿ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿ ಬಳಗಕ್ಕೆ ನೀಡಿದ್ದಾರೆ.
ಹೌದು, ಹೊಸ ವರ್ಷದ ಆರಂಭದಲ್ಲಿಯೇ ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಮಾಹಿತಿಯನ್ನು ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಭಾಕರನ್ ಎಂಬ ಹೊಸ ಪ್ರತಿಭೆ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾದಲ್ಲಿ ಅನುಶ್ರೀ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾರಾರ್, ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಸಿನಿಮಾದಲ್ಲಿದ್ದು ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದಾಗಿ ಅನುಶ್ರೀ ತಿಳಿದ್ದಾರೆ. ಚಿತ್ರದ ಮುಹೂರ್ತ ಕಾರ್ಯವೂ ಚಿಕ್ಕದಾಗಿ ನೇರವೇರಿದ್ದು, ಎಸ್ಎಂಪಿ ಪ್ರೊಡಕ್ಷನ್ ಹಾಗೂ ಲೋಹಿತ್ ಹೆಚ್ ಪ್ರೊಡಕ್ಷನ್ ಜಂಟಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರಲಿದೆ. ನಾಲ್ಕು ವರ್ಷದ ಬಳಿಕ ಅನುಶ್ರೀ ಬೆಳ್ಳೆತೆರೆಗೆ ಕಂಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿ ಬಳಗಕ್ಕೆ ಸಹಜವಾಗಿಯೇ ಸಂತಸ ತಂದಿದೆ. ಇದನ್ನೂ ಓದಿ: ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ
View this post on Instagram
ತಮ್ಮ ವಿಭಿನ್ನ ನಿರೂಪಣೆ ಶೈಲಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಕಳೆದ ಒಂದೂವರೆ ದಶಕದಿಂದ ನಿರೂಪಕರಾಗಿ ಜನಮನ್ನಣೆ ಪಡೆದಿರುವ ಅನುಶ್ರೀ ಸಿನಿಮಾದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. 2011ರಲ್ಲಿ ತೆರೆಕಂಡ ಭೂಮಿ ತಾಯಿ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ಗೆ ಎಂಟ್ರಿಕೊಟ್ಟ ಮಾತಿನ ಮೋಡಿಗಾರ್ತಿ ಬೆಳ್ಳಿ ಕಿರಣ, ಬೆಂಕಿಪಟ್ನ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಮಾದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?
ಉಪ್ಪು ಹುಳಿ ಖಾರ ಸಿನಿಮಾ ನಂತರ ನಾಲ್ಕು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಅನುಶ್ರೀ ಯೂಟ್ಯೂಬ್ ಚಾನೆಲ್ ಆರಂಭಿಸಿ ಸ್ಟಾರ್ ನಟ ನಟಿಯರ ಸಂದರ್ಶನ ಮಾಡುತ್ತಿದ್ದಾರೆ. ಇದೀಗ ನಿರೂಪಣೆ ಜೊತೆಗೆ ವಿಭಿನ್ನ ಕಥಾಶೈಲಿ ಒಳಗೊಂಡ ಸಿನಿಮಾದಲ್ಲೂ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.