ಮಂಗಳೂರು: ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಮತ್ತೆ ಡ್ರಗ್ಸ್ ಕಂಟಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅವರು ತಮ್ಮ ವಕೀಲರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಡ್ರಗ್ಸ್ ಪ್ರಕರಣ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಅವರು ಸಹಿ ಹಾಕಿರುವ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ನಿನ್ನೆ ಅನುಶ್ರೀ ಎಲ್ಲಿಯೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಲ್ಲದೆ ಬೆಂಗಳೂರಿನ ಮನೆಯಲ್ಲೂ ಇರಲಿಲ್ಲ. ಕೊನೆಗೆ ಅವರು ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ಸದ್ಯ ತಮ್ಮ ಆಪ್ತರ ಜೊತೆ ಅನುಶ್ರೀ ಮುಂಬೈನಲ್ಲಿರುವುದು ಖಚಿತವಾಗಿದ್ದು, ಅಲ್ಲಿಂದಲೇ ತಮ್ಮ ವಕೀಲರ ಜೊತೆ ಪ್ರಕರಣ ಸಂಬಂಧ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಚಾರ್ಜ್ ಶೀಟ್ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ
ಜಾರ್ಜ್ ಶೀಟ್ನಲ್ಲಿ ಏನಿತ್ತು..?
2007-0ರಲ್ಲಿ ನಾನು ಮತ್ತು ತರುಣ್ ಇಬ್ಬರೂ ಕೂಡಿ ಅನುಶ್ರೀಯವರಿಗೆ ಡ್ಯಾನ್ಸ್ ಕೋರಿಯಾಗ್ರಾಫಿ ಮಾಡಿರುತ್ತೇವೆ. ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್ಗೆ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟೀಸ್ ಮಾಡುತ್ತಾ ಕೆಲವು ದಿನ ಇದ್ದರು. ಕೆಲವೊಂದು ದಿನಗಳಲ್ಲಿ ನಾನು ಕೂಡ ತರುಣ್ ಜೊತೆಗೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತರುಣ್ನ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಟಸಿ ಮಾತ್ರೆಗಳನ್ನು ಸೇವನೆ ಮಾಡಿರುತ್ತೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು.
ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್ನಲ್ಲಿ ವಿನ್ ಆಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿ ಡ್ರಗ್ಸ್, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ಸೇವನೆ, ಖರೀದಿಯಲ್ಲಿ ಅನುಶ್ರೀಯವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀಯವರಿಗೆ ಕೋರಿಯಾಗ್ರಾಫಿಂಗ್ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿರುತ್ತೇವೆ. ಅನುಶ್ರೀಯವರು ಪ್ರ್ಯಾಕ್ಟೀಸ್ ಮಾಡಲು ನಮ್ಮ ರೂಂಗೆ ಬರುವಾಗ ಎಕ್ಟಸಿ ಮಾತ್ರೆಗಳನ್ನು ಖರೀದಿಸಿ ತಂದು ನಮಗೆ ನೀಡಿ ನಮ್ಮ ಜೊತೆ ಸೇವೆನೆಯನ್ನೂ ಮಾಡಿರುತ್ತಾರೆ. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ
ಡ್ಯಾನ್ಸ್ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ, ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ, ಪ್ರ್ಯಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದ್ದು, ಇದಕ್ಕೆ ಕಿಶೋರ್ ಅಮನ್ ಶೆಟ್ಟಿ ಸಹಿ ಕೂಡ ಹಾಕಿರುವ ಪ್ರತಿ ಲಭ್ಯವಾಗಿತ್ತು.
ಆದರೆ ಕಿಶೋರ್ ಶೆಟ್ಟಿ ಮಾತ್ರ ತಾನು ಅನುಶ್ರೀ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅವರು ತುಂಬಾ ಕಷ್ಟಪಟ್ಟು ಬಂದಿದ್ದು, ಅವರನ್ನು ನಾನು ಗೌರವಿಸುತ್ತೇನೆ. ಅಲ್ಲದೆ ಇತ್ತೀಚೆಗೆ ನಾನು ಅವರನ್ನು ಭೇಟಿಯಾಗಿಲ್ಲ, ಫೋನ್ ನಂಬರ್ ಕೂಡ ಇಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಿಶೋರ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?