ಮಂಗಳೂರು: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಸಾವಿನಿಂದ ಬೇಸರ, ಅಸಹನೆ, ಸಿಟ್ಟು ಉಕ್ಕಿಬರುತ್ತಿದೆ. ಕಾಶ್ಮೀರದ ಪ್ರಜಾಪ್ರಭುತ್ವ ಹೆಸರಲ್ಲಿ ಕೆಟ್ಟ ಜನರಿಗೆ ಬೆಂಬಲ ಕೊಟ್ಟು ಸರ್ಕಾರ ಯೋಧರ ಸಾವಿಗೆ ಕಾರಣವಾಗುತ್ತಿದೆ ಎಂದು ಹಿರಿಯ ನಟ ಅನಂತ್ನಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಧರು ಅನ್ಯಾಯವಾಗಿ ಸಾಯುವಂತೆ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಶ್ಮೀರದ ಪ್ರಜಾಪ್ರಭುತ್ವ ನೆಪದಲ್ಲಿ ಯೋಧರ ಸಾವಿಗೆ ಕಾರಣರಾಗುತ್ತಿದ್ದಾರೆ. ಪಾಕಿಸ್ತಾನವನ್ನು ತುಂಡರಿಸಿ, ಉಗ್ರರಿಗೆ ಪಾಠ ಕಲಿಸಿ ನರೇಂದ್ರ ಮೋದಿಯವರು ಮತ್ತೊಂದು ಇತಿಹಾಸ ಸೃಷ್ಟಿಸಬೇಕಾಗಿದೆ ಎಂದು ಅನಂತ್ ನಾಗ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಈ ವಿಚಾರದಲ್ಲಿ ಅಸಹಾಯಕತೆ ನಮ್ಮನ್ನು ಸುತ್ತುವರಿದಿದೆ. ರಾಜಕಾರಣಿಗಳು ಭಾರತದ ಎಡ ಮತ್ತು ಬಲ ಭುಜಗಳನ್ನು ಕತ್ತರಿಸಿದ್ದಾರೆ. ಧರ್ಮದ ಆಧಾರದ ಮೇಲೆ ವಿಭಜನೆಯಾದರೂ, ಸಮಸ್ಯೆಗಳಿಗೆ ಉತ್ತರ ಸಿಕ್ಕಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ 1965ರಲ್ಲಿ ಪಾಕಿಸ್ತಾನದ ಅಯೂಬ್ ಖಾನ್ ಭಾತರದ ಮೇಲೆ ದಾಳಿ ಮಾಡಿದಾಗ, ಅವನಿಗೆ ಪಾಠ ಕಲಿಸಿದ್ದರು. 1971ರಲ್ಲಿ ಇಂದಿರಾ ಗಾಂಧಿ ಅವರು ಪೂರ್ವ ಪಾಕಿಸ್ಥಾನವನ್ನು ಬಾಂಗ್ಲಾದೇಶವನ್ನಾಗಿ ನಿರ್ಮಾಣ ಮಾಡಿ ಕ್ರಮ ತೆಗೆದುಕೊಂಡಿದ್ದರು. ಈಗ ಉಗ್ರರ ದಾಳಿಯಿಂದ ದೇಶದ ಯೋಧರು ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ತಡ ಮಾಡಬಾರದು, ಇಂತಹ ದುಷ್ಕೃತ್ಯ ಮೆರೆದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಕಾಶ್ಮೀರದಂತಹ ಸಣ್ಣ ಜಾಗದಲ್ಲಿ ಇಂತಹ ಘೋರ ಘಟನೆಗಳು ನಡೆಯಲು ಬಿಟ್ಟಿದ್ದೇ ತಪ್ಪಾಗಿದೆ. ಒಂದೆಡೆ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿದೆ, ಇನ್ನೂ ನೆರೆಯ ಪಾಕಿಸ್ಥಾನವನ್ನು ಯಾವ ಸ್ಥಾನ ಮಾಡಬೇಕೆಂದು ಮೋದಿ ಅವರಿಗೆ ಗೊತ್ತಿದೆ. ಪಾಕಿಸ್ತಾನ ಭಯೋತ್ಪಾದಕರ ದೇಶ ಅನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಬೇರೆ ರಾಷ್ಟ್ರಗಳಿಂದ ಹಣ ಪಡೆದು ಇಂದು ಪಾಕಿಸ್ತಾನ ಬದುಕುತ್ತಿದೆ. ಕಾಶ್ಮೀರಿ ಹುಡುಗನ ಕೈಗೆ 350 ಕೆಜಿಯಷ್ಟು ಸಿಡಿಮದ್ದು ಕೊಟ್ಟವರು ಯಾರು? ಸ್ವಾತಂತ್ರ್ಯ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಅನಂತ್ನಾಗ್ ಕಿಡಿಕಾರಿದ್ದಾರೆ.
ಕಾಶ್ಮೀರವನ್ನು ಪೂರ್ತಿ ಸೇನೆಯ ಕೈಗೆ ಕೊಟ್ಟು ಉಗ್ರರಿಂದ ತಕ್ಕ ಪಾಠ ಕಲಿಸಬೇಕು. ಕಾಶ್ಮೀರದಲ್ಲಿ ಯೋಧರಿಗೆ ಕಲ್ಲು ತೂರುತ್ತಿದ್ದರೂ ಆಡಳಿತ ಸಹಿಸಿಕೊಳ್ತಿರೋದ್ಯಾಕೆ? ಅಲ್ಲಿ ಯೋಧರಿಗೆ ಸ್ವಾತಂತ್ರ್ಯ ನೀಡದಿರುವುದೇ ಇಂಥ ಸ್ಥಿತಿಗೆ ಕಾರಣ ಎಂದು ಹಿರಿಯ ನಟ ಅನಂತ್ನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv