ಕಾರವಾರ: ಲೋಕಸಭೆ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರುವ ಕೊನೇ ಅಸ್ತ್ರ ಪ್ರಿಯಾಂಕಾ ಗಾಂಧಿ, ಅವರು ರಾಹುಲ್ ಗಾಂಧಿಗಿಂತ ಪ್ರಭಾವಿಯಂತೆ, ಇಂದಿರಾಗಾಂಧಿ ಅವತಾರವಂತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೀರಿಗೆ ಬಂದ ನಾರಿ ಊರಿಗೆ ಬಾರದೇ ಇರುತ್ತಾಳೆಯೇ? ಅವಳ ಬಂಡವಾಳವೂ ಇನ್ನೇನು ಬಯಲಾಗಲಿದೆ. ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆಸ್ನ ಮಹಾಭಾರತ ಪೂರ್ಣಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬದ ಹೊರತಾಗಿ ಯಾರನ್ನೂ ಒಪ್ಪದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಮ ಮಂದಿರ ಕಟ್ಟಿದರೆ ದೇಶ ಎದ್ದು ನಿಲ್ಲುತ್ತದೆ. ಅದಕ್ಕೆ ಇದನ್ನು ನಿರ್ಮಿಸಲು ಹಲವು ಅಡ್ಡಿಗಳು ಬರುತ್ತಿದೆ. ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅರ್ಬನ್ ನಕ್ಸಲಿಯರೇ ತುಂಬಿಕೊಂಡಿದ್ದಾರೆ. ಈ ದೇಶಕ್ಕೆ ಒಂದು ಇತಿಹಾಸ ಪರಂಪರೆ ಇದೆ. ಅದನ್ನು ಅವರು ಒಪ್ಪುತ್ತಿಲ್ಲ ಎಂದರು.
ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಕಡೆ ಕಾಂಗ್ರೆಸ್ ರಾಷ್ಟ್ರದ್ರೋಹಿಗಳನ್ನು ಇಟ್ಟಿದೆ. ಮಾಧ್ಯಮದಲ್ಲೂ ಅರ್ಬನ್ ನಕ್ಸಲಿಯರು ಇದ್ದಾರೆ. ಅವರೇ ಎಲ್ಲೋ ಇದ್ದ ನನ್ನನ್ನು ಜನಪ್ರಿಯತೆಗೆ ತಂದಿದ್ದಾರೆ. ವಿವಾದಿತ ಹೇಳಿಕೆ ಎಂದು ನನಗೆ ಪ್ರಚಾರ ನೀಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದಗಳು. ಇಲ್ಲದೇ ಇರುವಂತ ವಿವಾದವನ್ನು ಸೃಷ್ಟಿಸಿ ಜನರಲ್ಲಿ ಕುತೂಹಲವನ್ನು ಮೂಡಿಸಿ ಸಾಧನೆ ಮಾಡಿದಕ್ಕೆ ನಿಮ್ಮನ್ನು ಶ್ಲಾಘಿಸುತ್ತೇನೆ ಎಂದು ಮಾಧ್ಯಮಗಳನ್ನು ಅನಂತ್ ಕುಮಾರ್ ಅವರು ಟೀಕಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv