– ರಾಹುಲ್ ಗಾಂಧಿಗೆ ದೇಶ, ಧರ್ಮದ ಬಗ್ಗೆ ಪ್ರಜ್ಞೆಯಿಲ್ಲ
ಕಾರವಾರ: ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ ಆದ್ರೆ ಮಗ ಹೇಗೆ ಬ್ರಾಹ್ಮಣನಾಗಲು ಸಾಧ್ಯ ಎಂದು ರಾಹುಲ್ ಗಾಂಧಿ ಅವರ ಬ್ರಾಹ್ಮಣ ಹೇಳಿಕೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬಿಜೆಪಿ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಕುಟುಂಬದ ಧರ್ಮವನ್ನೇ ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ಬ್ರಾಹ್ಮಣ ಹೇಳಿಕೆಗೆ ಪ್ರತಿಕ್ರಿಯಿಸಿ ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ ಆದ್ರೆ ಮಗ ಹೇಗೆ ಬ್ರಾಹ್ಮಣ ಆಗಲು ಸಾಧ್ಯ? ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ ಕಾಂಗ್ರೆಸ್ ಲ್ಯಾಬ್ನಲ್ಲಿ ಮಾತ್ರ ಇದೆ. ರಾಹುಲ್ ಗಾಂಧಿ ಸುಳ್ಳು ಹೇಳಿದರೂ ನಂಬುವಂತಹ ಸುಳ್ಳು ಹೇಳಬೇಕು ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿಗೆ ರಫೇಲ್ ಪದದ ಅರ್ಥ ಗೊತ್ತಿಲ್ಲ. ಅದರಲ್ಲಿ ಎಷ್ಟು ಅಕ್ಷರ ಇದೆ ಎಂದು ತಿಳಿದಿಲ್ಲ. ಅವರು ರಫೇಲ್ ಅಂದರೆ ಮೂರು ಚಕ್ರದ ಸೈಕಲ್ ಎಂದು ತಿಳಿದುಕೊಂಡಿದ್ದಾರೆ. ಸುಮ್ಮನೆ ರಫೇಲ್ ವಿಚಾರ ಹಿಡಿದುಕೊಂಡು ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ರಾಹುಲ್ ಅವರು ಬರೀ ಹಸಿ ಸುಳ್ಳನ್ನು ಹೇಳುತ್ತಾರೆ. ಇನ್ನೂ ಎರಡೇ ತಿಂಗಳು ಉಳಿದಿದೆ. ಆ ಮೇಲೆ ಸಾಮೂಹಿಕ ರಾಜಕೀಯ ಆತ್ಮಹತ್ಯೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಹಾಗೂ ವಿವಿಧ ಎಡಪಂಥೀಯ ಪಕ್ಷಗಳು ಮಾಡಿಕೊಂಡ ಮಹಾ ಘಟಬಂಧನ್ ಕುರಿತು ಲೇವಡಿಮಾಡಿದರು.
ಅಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆರವರು ಪರ್ಸಂಟೇಜ್ ಪಾಂಡೆ. ಇದು ಎಲ್ಲರಿಗೂ ಗೊತ್ತು. ದೇಶಪಾಂಡೆ ಅವರು ಜಿಲ್ಲೆಯ ರಸ್ತೆ ಅಥವಾ ಯಾವುದೇ ಅಭಿವೃದ್ಧಿ ಯೋಜನೆಯಲ್ಲಿ ಪರ್ಸಂಟೇಜ್ ತೆಗೆದುಕೊಳ್ಳುತ್ತಾರೆ. ಸದ್ಯದಲ್ಲಿಯೇ ಚುನಾವಣೆಗೆ ಬರುತ್ತಾರೆ ಎಂದು ಹೇಳಿ ವ್ಯಂಗ್ಯವಾಡಿದರು.
https://www.youtube.com/watch?v=Qs55NIJhfl0&list=PLB83sv5noycv11k7vzFiNgvcg_4JBgLVd
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv