ಕಾರವಾರ: ಲೋಕಸಭಾ ಚುನಾವಣೆಗೆ (Lok Sabha Election) ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾಗುತ್ತದೆ ಎಂದು ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಹೇಳಿದ್ದಾರೆ.
ಆರೋಗ್ಯದ (Health) ಸಮಸ್ಯೆಯಿಂದಾಗಿ ಚುನಾವಣಾ ರಾಜಕಾರಣ, ಪಕ್ಷದ ರಾಜಕಾರಣದಿಂದ ದೂರವಿದ್ದೆ. ಅಭಿಮಾನಿಗಳಿಂದ ಚುನಾವಣೆಗೆ ನಿಲ್ಲಬೇಕೆಂಬ ಒತ್ತಡ ಬರುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪೂಜಾ ಗಾಂಧಿ ದಂಪತಿ
ಪಕ್ಷ ಹಾಗೂ ರಾಜಕಾರಣದಿಂದ ಮೂರು ವರ್ಷದಿಂದ ದೂರ ಉಳಿದಿದ್ದ ಅನಂತ್ಕುಮಾರ್ ಹೆಗಡೆ ಇಂದು ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ.ಕಾಂಗ್ರೆಸ್ನವರು ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.