ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ಸಿಂಗ್ ನನಗೆ ಅಣ್ಣನ ಸಮಾನ. ನಾನು ಮತ್ತು ನನ್ನ ತಂದೆ ಆನಂದ್ಸಿಂಗ್ ಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ. ಉದ್ದೇಶಪೂರ್ವಕವಾಗಿ ನಾವಿಬ್ಬರೂ ಗಲಾಟೆ ಮಾಡಿಕೊಂಡಿಲ್ಲ ಎಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹೇಳಿದ್ದಾರೆ.
ಆನಂದ್ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹೊಸಪೇಟೆ ಮನೆಗೆ ಗಣೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಆದ ಗಲಾಟೆ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಿಗೆ ಎನೂ ಮಾತನಾಡುವುದಿಲ್ಲ. ಆನಂದಸಿಂಗ್ ನನಗೆ ಅಣ್ಣನ ಸಮಾನ. ನಮ್ಮಿಬ್ಬರ ಮಧ್ಯೆ ಗಲಾಟೆಯಾಗಿದ್ದು ಉದ್ದೇಶಪೂರ್ವಕವಾಗಿ ಅಲ್ಲವೆಂದು ತಿಳಿಸಿದರು. ಹಾಗೆಯೇ ಈ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ, ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಆದೇಶ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅಭಿಮಾನದಿಂದ ಅವರು ನಾನು ಸಚಿವನಾಗುತ್ತೇನೆ ಎಂದು ಹೇಳಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ, ಆದ್ರೆ ಕಾಂಗ್ರೆಸ್ಗೆ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡಲು ಬಿಡುವುದಿಲ್ಲ, ನಾವೆಲ್ಲಾ ಅವರ ಮನವೊಲಿಸುತ್ತೇವೆ ಎಂದು ತಿಳಿಸಿದರು.