ಅವಳ ಸಪೋರ್ಟಿನಿಂದ ನೀನು ಹೀಗೆ ಮಾಡ್ತೀರೋದು: ಶಾಸಕರಿಬ್ಬರ ಜಗಳದಲ್ಲಿ ಮಹಿಳೆಯ ಎಂಟ್ರಿ

Public TV
3 Min Read
anand singh GANESH copy

-ಹೆಣ್ಣಿಗೋಸ್ಕರಾ ನಡೀತಾ ಬಾಟಲ್ ಫೈಟ್?

ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಗಣೇಶ್ ಮತ್ತು ಆನಂದ್ ಸಿಂಗ್ ನಡುವಿನ ಡಿಶುಂ ಡಿಶುಂ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ವೇಳೆ ಗಣೇಶ್ ಕೊರಳಪಟ್ಟಿ ಹಿಡಿದಿರುವ ಆನಂದ್ ಸಿಂಗ್, ನೀನು ಅವಳ ಸಪೋರ್ಟಿನಿಂದ ಹೀಗೆಲ್ಲ ಮಾಡ್ತಿದ್ದೀಯಾ ಎಂದು ಹೇಳುವುದನ್ನ ಕೇಳಬಹುದು.

ಇಬ್ಬರ ಜಗಳಕ್ಕೆ ಕಾರಣವಾದ ಆ ಮಹಿಳೆ ಯಾರೆಂಬುದರ ಬಗ್ಗೆ ಚರ್ಚೆಗಳ ರಾಜಕೀಯ ಪಡಸಾಲೆಯಲ್ಲಿ ಆರಂಭಗೊಂಡಿವೆ. ಮೇಲ್ನೋಟಕ್ಕೆ ಮಹಿಳೆಗಾಗಿಯೇ ಈ ಜಗಳ ನಡೆದಿದೆ ಎಂದು ದೃಶ್ಯಗಳು ಹೇಳುತ್ತಿವೆ. ಆಪರೇಷನ್ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್ ಎಲ್ಲರನ್ನು ರಾಮನಗರ ಜಿಲ್ಲೆಯ ಬಿಡದಿಯ ರೆಸಾರ್ಟಿನಲ್ಲಿ ಇರಿಸಿತ್ತು.

anand singh GANESH

ರೆಸಾರ್ಟ್ ಸೇರಿದ ಶಾಸಕರು ಅಂದು ರಾತ್ರಿ ಪಾರ್ಟಿ ಮಾಡಿದ್ದರು. ಈ ವೇಳೆ ಮದ್ಯ ಸೇವನೆ ಮಾಡಿದ್ದ ಆನಂದ್ ಸಿಂಗ್ ನೇರವಾಗಿ ಗಣೇಶ್ ಕೋಣೆಗೆ ಎಂಟ್ರಿ ನೀಡಿದ್ರು. ಈ ವೇಳೆ ಕೋಣೆಯಲ್ಲಿದ್ದ ಗಣೇಶ್ ಕೊರಳಪಟ್ಟಿ ಹಿಡಿದ ಆನಂದ್ ಸಿಂಗ್ ಜಗಳಕ್ಕೆ ನಿಂತಿದ್ದರು. ಆನಂದ್ ಸಿಂಗ್ ಹಲ್ಲೆಗೆ ಮುಂದಾಗುತ್ತಿದ್ದಂತೆ ಗಣೇಶ್ ಅಣ್ಣ ನೀವು ಮಾಡ್ತೀರೋದು ತಪ್ಪು ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಕೇವಲ ಮಾತಿಗೆ ಮಾತು ಬೆಳೆದಿದೆ ಅಷ್ಟೇ, ಹಲ್ಲೆ ಮಾಡಿಲ್ಲ: ಕಂಪ್ಲಿ ಗಣೇಶ್

ಹಲ್ಲೆಗೆ ಬಳಿಕ ಗಣೇಶ್ ನಾಪತ್ತೆಯಾದ್ರೆ, ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ನಾಪತ್ತೆಯಾಗಿದ್ದ ಗಣೇಶ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ನನ್ನ ಪ್ರಾಣ ರಕ್ಷಣೆಗಾಗಿ ನಾನು ಹಲ್ಲೆ ಮಾಡಿದ್ದೇನೆ. ಘಟನೆಯಲ್ಲಿ ನನ್ನದು ಯಾವುದೇ ತಪ್ಪಿಲ್ಲ ಎಂದು ಬರೆದುಕೊಂಡಿದ್ದರು. ಕಣ್ಮರೆಯಾದ ಒಂದು ತಿಂಗಳ ಬಳಿಕ ಬಿಡದಿ ಪೊಲೀಸರು ಶಾಸಕ ಗಣೇಶ್‍ರನ್ನು ಬಂಧಿಸಿದ್ದರು.

ANAND SINGH copy

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗಣೇಶ್ ಪರ ವಕೀಲರು ಈ ವಿಡಿಯೋವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ

ಆನಂದ್ ಸಿಂಗ್ ನೀಡಿದ ದೂರಿನಲ್ಲಿ ಏನಿದೆ?
ರಾಮನಗರ ತಾಲೂಕು ಬಿಡದಿ ಹೋಬಳಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆ ಹಾಗೂ ಬರ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲು ಸಭೆ ಕೆರೆಯಲಾಗಿತ್ತು. ಈ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಶನಿವಾರದಂದು ಸಭೆಯ ಬಳಿಕ ಇತರೇ ಶಾಸಕರೊಂದಿಗೆ ಊಟ ಮುಗಿಸಿಕೊಂಡು ಕಂಪ್ಲಿ ಶಾಸಕರಾದ ಗಣೇಶ್ ಅವರೊಂದಿಗೆ ರೂಂ ಕಡೆ ಹೋಗುತ್ತಿದ್ದೇವು. ಈ ವೇಳೆ ಗಣೇಶ್ ಮಾತನಾಡುತ್ತಾ,”ಈ ಬಾರಿ ಚುನಾವಣೆಗೆ ನೀನು ನನಗೆ ಹಣ ಸಹಾಯ ಸರಿಯಾಗಿ ಮಾಡಲಿಲ್ಲ. ನಿನ್ನ ತಂಗಿ ಮಗ ಸಂದೀಪ್‍ನನ್ನು ಮುಗಿಸುತ್ತೇನೆ” ಅಂದರು. ಅದಕ್ಕೆ ನಾನು,”ಯಾಕಪ್ಪ ನನ್ನ ಕುಟುಂಬದವರ ವಿಷಯಕ್ಕೆ ಬರುತ್ತೀಯಾ” ಎಂದು ಪ್ರಶ್ನಿಸಿದೆ. ಅದಕ್ಕೆ ಕೋಪಗೊಂಡ ಗಣೇಶ್, “ಮೊದಲು ನಿನ್ನನ್ನು ಸಾಯಿಸುತ್ತೇನೆ. ಆಗ ಎಲ್ಲವು ಸರಿಯಾಗುತ್ತೆ” ಅಂತ ಜೋರು ಜೋರಾಗಿ ಅವಾಚ್ಯ ಪದಗಳನ್ನು ಬಳಸಿ ನನ್ನನ್ನು ನಿಂದಿಸಿದ್ದಾರೆ

Anand Singh Kampli Ganesh

ಬಳಿಕ ಪಕ್ಷದ ಮುಖಂಡರನ್ನು ಎತ್ತಿ ಕಟ್ಟಿಕೊಂಡು ಅವರ ಕೈಗೆ ಸಿಕ್ಕ ಪಾಟ್ ಹಾಗೂ ದೊಣ್ಣೆಯಿಂದ ನನಗೆ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ನನ್ನ ತಲೆಯನ್ನು ಗೋಡೆಗೆ ಗುದ್ದಿ,”ಪಿಸ್ತೂಲ್ ಕೊಡಿ. ಇವನನ್ನು ಇಲ್ಲೇ ಮುಗಿಸುತ್ತೇನೆ. ಇವನು ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟಿದ್ದಾನೆ. ಇವನ ಪ್ರಾಣ ತೆಗೆದು ಇಲ್ಲೇ ಮುಗಿಸಿಬಿಡುತ್ತೇನೆ” ಎಂದು ಗದರಿದ್ದಾರೆ. ಬಳಿಕ ನಾನು ಕೆಳಗೆ ಬಿದ್ದಾಗ ನನ್ನನ್ನು,”ಸಾಯಿ ಸಾಯಿ” ಎಂದು ಹೇಳಿ ತುಳಿದು, ಕೈ ಮುಷ್ಠಿಕಟ್ಟಿ ಎದೆಗೆ ಹೊಡೆದಿದ್ದಾರೆ. ಇದರಿಂದ ಕಣ್ಣುಗಳು, ಮುಖ ಹಾಗೂ ದೇಹದ ಇತರೇ ಭಾಗಗಳಿಗೆ ಏಟುಗಳಾಗಿ ಊದಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *