ಬಳ್ಳಾರಿ: ಕಾಂಗ್ರೆಸ್ ಶಾಸಕ ಅನಂದ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿಜಯನಗರ ಕ್ಷೇತ್ರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಪರವಾಗಿ ಪೋಸ್ಟ್ ಅಭಿಯಾನ ಶುರುವಾಗಿದೆ.
ಸೋಮವಾರದಂದು ದೋಸ್ತಿ ಸರ್ಕಾರ ಜಿಂದಾಲ್ ವಿಚಾರದಲ್ಲಿ ಮನನೊಂದ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿ ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ. ಈ ವಿಚಾರ ಸದ್ಯ ದೋಸ್ತಿ ಪಾಳಯದಲ್ಲಿ ಕಳವಳ ಸೃಷ್ಟಿಸಿದೆ. ದೋಸ್ತಿ ಸರ್ಕಾರ ಉಳಿಯುತ್ತಾ? ಇಲ್ಲವಾ? ಆನಂದ್ ಸಿಂಗ್ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೂಡ ಕಾಂಗ್ರೆಸ್ ಕೈ ಬಿಟ್ಟು ರಾಜಿನಾಮೆ ನೀಡಿದ್ದಾರೆ. ಇವರ ಬಳಿಕ ಇತರೆ ನಾಯಕರು ಕೂಡ ರಾಜೀನಾಮೆ ನೀಡಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ನಡುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ಅಭಿಮಾನಿಗಳು ಪೋಸ್ಟ್ ಅಭಿಯಾನ ಆರಂಭಿಸಿದ್ದಾರೆ. ಅಲ್ಲದೆ ಇಂದು ತಮ್ಮ ನೆಚ್ಚಿನ ನಾಯಕನ ಪರವಾಗಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಈ ಸಂಬಂಧ ಸಭೆ ನಡೆಸಲು ನಿರ್ಧರಿಸಿದ್ದಾರೆ. ಹೊಸಪೇಟೆಯ ಶಾನ್ ಸರ್ಕಲ್ನಲ್ಲಿ ನಡೆಯುವ ಸಭೆಗೆ ಅಭಿಮಾನಿಗಳಿಂದ ಆಹ್ವಾನ ನೀಡಲಾಗಿದೆ.
ನಾನೆಂದು ನಿಮ್ಮ ಮನೆ ಮಗ. ನನ್ನಿಂದ ನೋವು ಉಂಟಾಗಿದ್ದರೆ ಕ್ಷಮೆ ಇರಲಿ. ಏಳು ಜನ್ಮ ಬಂದರೂ ನಿಮ್ಮ ಋಣ ತೀರಿಸಲಿಕ್ಕೆ ಆಗೋಲ್ಲ ಎಂದು ಬರೆದ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.