ಮಡಿಕೇರಿ: ಸುಂದರ ಪ್ರಕೃತಿಯ ಮಡಿಲು ಕೊಡಗಿನ ಪರಿಸರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆನಂದ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಪಿ.ವಾಸು ನಿರ್ದೇಶನದಲ್ಲಿ, ಯೋಗಿ ದ್ವಾರಕೀಶ್ ನಿರ್ಮಾಪಕರಾಗಿರುವ ಚಿತ್ರದ ಹಾಡು ಹಾಗೂ ಫೈಟಿಂಗ್ ಸೀನ್ ಅನ್ನು ಕೊಡಗಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕೊಡಗಿನ ಮಲೆನಾಡಿನ ಕಲ್ಲು ಕ್ವಾರಿ ಹಾಗೂ ಕೊಯನಾಡಿನ ಅರಣ್ಯ ಪ್ರದೇಶದಲ್ಲಿ ಡ್ರಿಲ್ಲಿಂಗ್ ಫೈಟ್ ಸೀನ್ಗಳನ್ನು ಸೆರೆಹಿಡಿಯಲಾಗುತ್ತಿದೆ.
ಸಿನಿಮಾದಲ್ಲಿ ಶಿವಣ್ಣಗೆ ರಚಿತಾ ರಾಮ್ ನಾಯಕಿ ನಟಿಯಾಗಿದ್ದು, ಚಿತ್ರಕ್ಕೆ ಗುರುಕಿರಣ್ ಮ್ಯೂಸಿಕ್ ನೀಡಿದ್ದಾರೆ. ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಸುಹಾಸಿನಿ, ಅನಂತ್ ನಾಗ್ ಸೇರಿದಂತೆ 35ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ. ಮ್ಯೂಸಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈಗಾಗಲೇ ರಾಜ್ಯದ ವಿವಿಧೆಡೆ 67 ದಿನ ಚಿತ್ರದ ಶೂಟಿಂಗ್ ಮುಗಿದಿದೆ. ಕೊಡಗಿನಲ್ಲಿ 6 ದಿನ ಚಿತ್ರೀಕರಣ ನಡೆದಿದೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದೆ.
ಎರಡು ದಿನದಿಂದ ಶೂಟಿಂಗ್ ನಡೆಯುತ್ತಿದೆ. ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿದೆ. ಕುಟುಂಬದೊಂದಿಗೆ ಕುಳಿತು ನೋಡುವಂತಹ ಸಿನಿಮಾವಾಗಿದ್ದು, ನಾನು ಇಂದಿನಿಂದ ಚಿತ್ರೀಕರಣಕ್ಕೆ ಭಾಗಿಯಾಗಿದ್ದೇನೆ. ಕೊಡಗು ನನಗೆ ಇಷ್ಟವಾದ ಸ್ಥಳವಾಗಿದೆ. ಸಿನಿಮಾದ ಎಲ್ಲ ಕಲಾವಿದರ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ ಎಂದು ಶಿವಣ್ಣ ಹೇಳಿದ್ದಾರೆ.