ಬೆಂಗಳೂರು: ಬಂತು ಬಂತು ಅನ್ನುವಷ್ಟರಲ್ಲಿ ಅಮೂಲ್ಯ ಯ ಮದುವೆ ಬಂದೇ ಬಿಟ್ಟಿತು. ಇನ್ನೇನು ಶುಕ್ರವಾರ ಬೆಳಗಾದರೆ ಅಮ್ಮುಗೆ ತಾಳಿ ಕಟ್ಟುವ ಶುಭವೇಳೆ ಕಣ್ಣೆದುರು ಬರುತ್ತದೆ. ಆದಿಚುಂಚನಗಿರಿ ಮಠದಲ್ಲಿ ಈಗಾಗಲೇ ಇದಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಕುಟುಂಬದ ಆಪ್ತರು, ಬಂಧುಗಳು, ಸ್ನೇಹಿತರು ಹಾಜರಿರಲಿದ್ದಾರೆ.
ಬುಧವಾರ ಮತ್ತು ಗುರುವಾರ ಬೆಂಗಳೂರಿನ ವಧು ವರರ ಮನೆಗಳಲ್ಲಿ ಹಲವು ವಿಶೇಷ ಪೂಜೆಗಳು ನಡೆಯಿತು. ಬುಧವಾರ ಮದುಮಗ ಜಗದೀಶ್ ಮನೆಯಲ್ಲಿ ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ನೆರವೇರಿದರೆ, ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಿತು. ಇಂದು ಅದರ ಮುಂದುವರಿದ ಭಾಗವಾಗಿ ಅಮೂಲ್ಯ ಅರಿಶಿಣ ಶಾಸ್ತ್ರದಲ್ಲಿ ಪಾಲುಗೊಂಡರು. ಮನೆ ಮಂದಿ ಸೇರಿದಂತೆ ಬಂಧು ಬಾಂಧವರು ಅಮ್ಮುಗೆ ಅರಿಶಿಣ ಹಚ್ಚುವ ಮೂಲಕ ಮದುಮಗಳ ಕಳೆ ತಂದರು.
ಅರಿಶಿಣ ಶಾಸ್ತ್ರ ಮುಗಿಸಿದ ಮೇಲೆ ಅಮೂಲ್ಯ ಮತ್ತವರ ಕುಟುಂಬ ನೇರವಾಗಿ ಆದಿಚುಂಚನಗಿರಿಗೆ ಪ್ರಯಾಣ ಬೆಳೆಸಿತು. ದೇವರ ದರ್ಶನ ಪಡೆದ ನಂತರ ಮಠದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಟುಂಬದ ಎಲ್ಲಾ ಸದಸ್ಯರು ಮಧ್ಯಾಹ್ನದ ಭೋಜನವನ್ನು ಅಲ್ಲಿಯೇ ಮುಗಿಸಿದರು. ಇತ್ತ ಜಗದೀಶ್ ಮನೆಯಲ್ಲಿ ಪೂಜೆ ನಡೆಯಿತು. ಅವರೂ ಮಧ್ಯಾಹ್ನದ ಹೊತ್ತಿಗೆ ಆದಿಚುಂಚನಗಿರಿಗೆ ಹೊರಟರು.
ವರನನ್ನು ಮದುಮಗಳ ಕುಟುಂಬ ಆತ್ಮೀಯವಾಗಿ ಬರ ಮಾಡಿಕೊಂಡಿತು. ಎಲ್ಲರ ಮುಖಗಳಲ್ಲಿ ಅದಾಗಲೇ ಅಮ್ಮು ಮದುವೆಯ ಕಳೆಯೇ ನಲಿದಾಡುತ್ತಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಅಮ್ಮುಗೆ ತಾಳಿ ಕಟ್ಟುವ ಶುಭ ವೇಳೆ ಬರಲಿದೆ ಅನ್ನೋದೆ ಎದ್ದು ಕಾಣುತ್ತಿತ್ತು. ಗುರುವಾರ ಸಂಜೆಯಿಂದಲೇ ಅಮ್ಮು ಮತ್ತು ಜಗ್ಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲವೂ ಅವರ ಸಂಪ್ರದಾಯದ ಪ್ರಕಾರ ನಡೆಯುತ್ತಿದೆ.