ನವದೆಹಲಿ: ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆ ಮುಸ್ಲಿಮರ ತ್ರಿವಳಿ ತಲಾಕ್ಗೆ ನಿಷೇಧ ಹೇರಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ತ್ರಿವಳಿ ತಲಾಖ್ ಭೂತ ಇನ್ನೂ ಕೊನೆಗೊಂಡಿಲ್ಲ.
ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಖಾಲಿದ್ ಬಿನ್ ಯೂಸುಫ್ ಖಾನ್ ಅನ್ನೋರು ಪತ್ನಿಗೆ ತ್ರಿವಳಿ ತಲಾಖ್ ನೀಡೋಕೆ ಮುಂದಾಗಿದ್ದಾರೆ. ಮೂರರಲ್ಲಿ ವಾಟ್ಸಪ್ ಮತ್ತು ಎಸ್ಎಂಎಸ್ ಮೂಲಕ ಈಗಾಗಲೇ ಎರಡು ತಲಾಖ್ ಹೇಳಿದ್ದಾರೆ. ಇದ್ರಿಂದ ನೊಂದಿರುವ ಪತ್ನಿ ಯಸ್ಮೀನ್ ಖಾಲೀದ್ ಡಿಸೆಂಬರ್ 11ರೊಳಗೆ ತನಗೆ ನ್ಯಾಯ ಸಿಗದಿದ್ರೆ ಎಎಂಯು ಕುಲಪತಿಯ ಮನೆ ಮುಂದೆಯೇ ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಆದ್ರೆ ಪ್ರೊಫೆಸರ್ ಖಾಲಿದ್ ಯೂಸ್ ತಲಾಖ್ ನೀಡಿದ್ದನ್ನು ಸಮರ್ಥಿಸಿದ್ದಾರೆ. ಆಕೆ ಎರಡು ದಶಕಗಳಿಂದ ತನಗೆ ಕಿರುಕುಳ ನೀಡುತ್ತಿದ್ದಳು. ತಾನು ಪದವೀಧರೆ ಅಂತ ಸುಳ್ಳು ಹೇಳಿ ಮದುವೆಯಾಗಿದ್ದಾಳೆ. ತಾನು ವಾಟ್ಸಪ್ ಮತ್ತು ಎಸ್ಎಂಎಸ್ನಲ್ಲಿ ಮಾತ್ರ ಹೇಳಿದ್ದಲ್ಲ. ಷರಿಯಾ ಪ್ರಕಾರ ಇಬ್ಬರ ಸಮ್ಮುಖದಲ್ಲಿ ಸಮಯ ತೆಗೆದುಕೊಂಡೇ ಬಾಯಲ್ಲಿ ತಲಾಖ್ ಹೇಳಿದ್ದೇನೆ. ಸರಿಯಾದ ಸಮಯಕ್ಕೆ ಮೂರನೇ ತಲಾಖ್ ಕೂಡ ನೀಡಲಿದ್ದೇನೆ. ನನ್ನನ್ನು ಯಾರಿಗೂ ತಡೆಯೋಕೆ ಆಗಲ್ಲ. ಆಕೆ ಏನು ಮಾಡ್ಕೊಂಡ್ರು ನಾನು ಕ್ಯಾರೇ ಮಾಡಲ್ಲ ಅಂತ ದರ್ಪದ ಮಾತನ್ನಾಡಿದ್ದಾರೆ. ಆದ್ರೆ ತಾನು ಅಲಿಘಡ ವಿವಿಯಿಂದ ಎಂಎ ಮತ್ತು ಬಿಎಡ್ ಪದವಿ ಪಡೆದಿರೋದಾಗಿ ಪತ್ನಿ ಯಾಸ್ಮಿನ್ ತಿಳಿಸಿದ್ದಾರೆ.