ಮೈಸೂರು: ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ನಗರದ ಅಮೃತೇಶ್ವರ ದೇಗುಲದಲ್ಲಿ ಬರೋಬ್ಬರಿ ಹತ್ತು ಲಕ್ಷ ರೂಪಾಯಿಯ ವಿವಿಧ ಬಗೆಯ ನೋಟುಗಳಿಂದ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ಅಮೃತೇಶ್ವರಿ ದೇಗುಲದ ಶ್ರೀ ಬಾಲಾ ತ್ರಿಪುರ ಸುಂದರಿ ದೇವಿಗೆ ಒಂದು ರೂ.ನಿಂದ ಹಿಡಿದು ಎರಡು ಸಾವಿರ ರೂಪಾಯಿವರೆಗಿನ ನೋಟಿನ ಅಲಂಕಾರವನ್ನು ಮಾಡಲಾಗಿತ್ತು. ಸುಮಾರು 10 ಲಕ್ಷ ರೂ. ಮೌಲ್ಯದ 1, 5, 10, 20, 50, 100, 200, 500 ಹಾಗೂ 2,000 ಮುಖಬೆಲೆ ನೋಟುಗಳಿಂದ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.
ದೀಪಾವಳಿಯ ದಿನ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಮೃತೇಶ್ವರ ದೇವಾಲಯದ ಸಿಬ್ಬಂದಿ ಶ್ರದ್ಧಾ-ಭಕ್ತಿಯಿಂದ ದೇವಿಗೆ ವಿಶಿಷ್ಟ ರೂಪದಲ್ಲಿ ನೋಟಿನ ಅಲಂಕಾರವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಭಕ್ತಾದಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ರತ್ಲಂ ನಗರದ ಮಹಾಲಕ್ಷ್ಮೀ ದೇವಾಲಯದ ದೇವಿಗೆ ನಗದು, ಚಿನ್ನಾಭರಣ ಮತ್ತು ವಜ್ರಾಭರಣ ಸೇರಿದಂತೆ ಒಟ್ಟು 100 ಕೋಟಿ ರೂ.ನಲ್ಲಿ ಅಲಂಕಾರ ಮಾಡಿದ್ದರು. ಮಹಾಲಕ್ಷ್ಮೀ ದೇಗುಲಕ್ಕೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿ, ನಾನು ಹಲವು ವರ್ಷಗಳಿಂದ ಇಲ್ಲಿಯ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಮೊದಲು 6 ರಿಂದ 7 ಲಕ್ಷ ರೂ. ಮಾತ್ರ ಬಳಸಿ ದೇಗುಲವನ್ನು ಅಲಂಕಾರ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 100 ಕೋಟಿ ರೂ.ನಲ್ಲಿ ಆಲಯವನ್ನು ಅಲಂಕರಿಸಲಾಗಿದೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv