ಬೆಂಗಳೂರು: ಯುವಜನತೆ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸದೃಢ ರಾಷ್ಟ್ರ ಹಾಗೂ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
ಏಷ್ಯಾನೆಟ್ ವರ್ಕ್ ಗ್ರೂಪ್ ಹಾಗೂ ಎಸ್ ಸಿಸಿ ತಂಡದ ವತಿಯಿಂದ ಆಯೋಜಿಸಿರುವ ಅಮೃತ ಮಹೋತ್ಸವ ಯಾತ್ರಾ ಕಾರ್ಯಕ್ರಮಕ್ಕೆ ಬುಧವಾರ ರಾಜಭವನದ ಅಂಗಳದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಏಷ್ಯಾನೆಟ್ ವರ್ಕ್ ಗ್ರೂಪ್ ವತಿಯಿಂದ ಆಯೋಜಿಸಿರುವ ಅಮೃತ ಮಹೋತ್ಸವ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎನ್ ಸಿಸಿ ಕೆಡೆಟ್ ಗಳು ಭಾರತೀಯ ವಿಜ್ಞಾನ ಸಂಸ್ಥೆ, ಇಸ್ರೋ ಮತ್ತು ರಾಷ್ಟ್ರೀಯ ಮಿಲಿಟರಿ ಸ್ಮಾರಕ, ಇನ್ಫೋಸಿಸ್ ಮುಂತಾದ ಪ್ರಮುಖ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು, ಸಂಸ್ಥೆಗಳ ಕಾರ್ಯಗಳು ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಈ ಯಾತ್ರೆ ಯುವಕರಿಗೆ ದೇಶದ ಸಾಧನೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಹೇಳುವುದರ ಜೊತೆಗೆ ಏಷಿಯಾ ನೆಟವರ್ಕ್ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು “ಆಜಾದಿ ಕಾ ಅಮೃತ್ ಮಹೋತ್ಸವ” ಎಂದು ಆಚರಿಸುತ್ತಿದೆ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಸಲಾಗುತ್ತಿದೆ. “ಆಜಾದಿ ಕಾ ಅಮೃತ್ ಮಹೋತ್ಸವ”ದಲ್ಲಿ ಪ್ರಗತಿಪರ ಭಾರತದ 75 ವರ್ಷಗಳ ಸ್ವಾತಂತ್ರ್ಯ ಮತ್ತು ಜನತೆ, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ವರ್ಷಗಳಲ್ಲಿ ಭಾರತದ ಬೆಳವಣಿಗೆ ಹಾಗೂ ಇತಿಹಾಸದ ಸುವರ್ಣ ನೆನಪುಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಆತ್ಮ ನಿರ್ಭರ ಭಾರತ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಏಷಿಯಾ ನ್ಯೂಸ್ ನೆಟ್ ವರ್ಕ್ ಕಾರ್ಯಕಾರಿ ಅಧ್ಯಕ್ಷರಾದ ರಾಜೇಶ್ ಕಾಲ್ರ, ಸುವರ್ಣ ನ್ಯೂಸ್, ಕನ್ನಡಪ್ರಭ ಸಂಸ್ಥೆ ಮುಖ್ಯ ಸಂಪಾದಕರಾದ ರವಿ ಹೆಗಡೆ, ಸಿಇಓ ನೀರಜ್ ಕೊಹ್ಲಿ, ಎನ್ ಸಿಸಿ ಕಮಾಂಡರ್ ಕರ್ನಲ್ ಬಸಂತ್ ಸಿಂಗ್ , ಸಹಾಯಕ ಸಂಪಾದಕರಾದ ವಿನೋದ್ ಕುಮಾರ್, ಮಾರ್ಕೆಟಿಂಗ್ ಮುಖ್ಯಸ್ಥರಾದ ಕಿರಣ್ ಅಪ್ಪಚ್ಚು ಸೇರಿದಂತೆ ಮುಂತಾದ ಗಣ್ಯರು, ಎನ್ ಸಿಸಿ ಕೆಡೆಟ್ ಗಳು ಉಪಸ್ಥಿತರಿದ್ದರು.