ದಿಸ್ಪುರ್: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಸ್ಸಾಂನ (Assam) ತೇಜ್ಪುರ್ನ ಐತಿಹಾಸಿಕ ಮಹಾಭೈರಬ್ ದೇವಾಲಯಕ್ಕೆ (Mahabhairab Temple) ಭೇಟಿ ನೀಡಿ ಅವರಣದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಅಸ್ಸಾಂಗೆ ಮೂರು ದಿನಗಳ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಶಿಲ್ಲಾಂಗ್ನಿಂದ ಸಂಜೆ ಇಲ್ಲಿಗೆ ಆಗಮಿಸಿದರು. ಈ ವೇಳೆ ಅವರಿಗೆ `ಗಯಾನ್ ಮತ್ತು ಬಯಾನ್’ (ಡೋಲು ಮತ್ತು ಸಿಂಬಲ್ಗಳೊಂದಿಗೆ ಧಾರ್ಮಿಕ ನೃತ್ಯ ಪ್ರದರ್ಶನ) ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಬಳಿಕ ಅವರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಆವರಣದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್ – ಜೈ ಶ್ರೀರಾಮ್ ಘೋಷಣೆ
ಅಮಿತ್ ಶಾ ಅವರು ದೇವಾಲಯದ ಅಂಗಳದಲ್ಲಿ ಬಕೆಟ್ನಿಂದ ನೀರು ಸುರಿದು ಬಳಿಕ ಒರೆಸಿ ಸ್ವಚ್ಛಗೊಳಿಸಿದ್ದಾರೆ. ಅವರೊಂದಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಹ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ತೇಜ್ಪುರ ವಿಶ್ವವಿದ್ಯಾಲಯಕ್ಕೆ ದೇವಸ್ಥಾನದ ಆವರಣದಿಂದ ಹೊರಡುವ ಮೊದಲು ದೇವಾಲಯದ ಬಳಿ ಸೇರಿದ್ದ ಜನರಿಗೆ ಕೈ ಬೀಸಿ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಜ.22 ರಂದು ನಡೆಯಲಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ದೇವಾಲಯಗಳ ಸ್ವಚ್ಛತೆಯ ಅಭಿಯಾನಕ್ಕೆ ಕರೆಕೊಟ್ಟಿದ್ದರು. ಪ್ರಧಾನಿಯವರ ಕರೆಯಿಂದ ದೇಶಾದ್ಯಂತ ಜನರು ತಮ್ಮ ಸುತ್ತಮುತ್ತಲಿನ ದೇವಾಲಯಗಳನ್ನು ಸ್ವಚ್ಛಗೊಳಿಸುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ