ಮೈಸೂರು: ಲೋಕಸಭಾ ಚುನಾವಣೆಗೆ (Lok Sabha elections 2024) ಇನ್ನೇನು ತಿಂಗಳೇ ಬಾಕಿ ಇದೆ. ಈ ಸಮಯದಲ್ಲೇ ಬಿಜೆಪಿಯ (BJP) ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಮೈಸೂರು (Mysuru) ಭಾಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತವರೂರಿನಿಂದಲೇ ಕರ್ನಾಟಕದ ಲೋಕಸಭಾ ಚುನಾವಣೆಯ ಪಾಂಚಜನ್ಯ ಮೊಳಗಿಸಲಿದ್ದಾರೆ.
ಸುತ್ತೂರು ಮಠದ ಕಾರ್ಯಕ್ರಮಕ್ಕಾಗಿ ಗೃಹ ಸಚಿವ ಅಮಿತ್ ಶಾ ಮೈಸೂರಿಗೆ ಬಂದಿದ್ದರು ಕೂಡ ಈ ಕಾರ್ಯಕ್ರಮ ಮುಗಿಸಿ ಹಾಗೇಯೆ ವಾಪಸ್ ಹೋಗುತ್ತಿಲ್ಲ. ಬದಲಾಗಿ ಮುಕ್ಕಾಲು ದಿನ ಕರ್ನಾಟಕ ಲೋಕಸಭಾ ಕ್ಷೇತ್ರಗಳ ವಿಚಾರದಲ್ಲಿ ರಣ ತಂತ್ರ ಹಣೆಯುವ ಕಾರ್ಯ ಮಾಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಹಳೆ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಗಳ ಪಿಚ್ ಸ್ಟಡಿ ಮಾಡಲಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮೈಸೂರು ಭಾಗವೆ ತಮ್ಮ ಫಸ್ಟ್ ಟಾರ್ಗೆಟ್ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಸೇರಿ ಬೆಂಗಳೂರಿನಲ್ಲಿ 4 ದಿನ ಮದ್ಯ ಬಂದ್!
ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರ ಬಿಜೆಪಿಯ ಗೆಲುವಿನ ಮಂದಹಾಸ ಬೀರಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿತ್ತು. ಹೀಗಾಗಿ ಈ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಿ ಸಿಎಂಗೆ ತವರು ಭಾಗದಲ್ಲೇ ಮುಖಭಂಗ ಮಾಡುವ ನಿಟ್ಟಿನಲ್ಲಿ ಈ ರಣತಂತ್ರ ತಯಾರಿಗಾಗಿ ಸಭೆ ಮಾಡಲಿದ್ದಾರೆ. ಮೈಸೂರು ಭಾಗದ ಅದರಲ್ಲೂ ಮೈಸೂರು- ಕೊಡಗು ಕ್ಷೇತ್ರದ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ.
ತಡರಾತ್ರಿ 2:40ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ, ಹರ್ಷವರ್ಧನ್ ನಗರ ಪೊಲೀಸ್ ಆಯುಕ್ತ ರಮೇಶ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತಿತರರು ಹಾಜರಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸುತ್ತೂರು ಗ್ರಾಮಕ್ಕೆ ತೆರಳಲಿದ್ದು, ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿರ್ಮಿಸಿರುವ ಗೆಸ್ಟ್ ಹೌಸ್ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಗೃಹಮಂತ್ರಿಗಳ ಉತ್ತರಕ್ಕಾಗಿ ಕಾದಿವೆ ಕನ್ನಡಿಗರ ಅಮಿತ ಪ್ರಶ್ನೆಗಳು: ಸಿಎಂ ಟ್ವೀಟ್