ಬೆಂಗಳೂರು: ಈಗಾಗಲೇ ಗುಜರಾತ್ ಚುನಾವಣೆ ಮುಗಿದಿದ್ದು, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಗುಜರಾತ್ ಫಲಿತಾಂಶದ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿಯಲ್ಲಿ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಎಲೆಕ್ಷನ್ ಕಾರ್ಯತಂತ್ರ ನಡೆಯುತ್ತದೆ. ವಾರ್ ರೂಂ, ಅಮಿತ್ ಶಾ ಅವರ ಸ್ಟ್ರ್ಯಾಟಜಿ ರೂಂ ಕೂಡ ವಿಲ್ಲಾದಲ್ಲೇ ಇದ್ದು, ವಾರ್ ರೂಂನ 10 ತಂಡವೂ ಬೆಂಗಳೂರಿಗೆ ಶಿಫ್ಟ್ ಆಗಲಿದೆ.
ಅಮಿತ್ ಶಾ ಅವರು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಮಂಗಳೂರು, ಮೈಸೂರು, ಹುಬ್ಬಳಿ, ಬೆಳಗಾವಿಗೂ ಕೂಡ ಅವರು ಹೋಗಲಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಸಲಿ ಆಟ ಶುರುವಾಗುತ್ತದೆ.