ಮಂಡ್ಯ: ನಾಳೆ ಮಂಡ್ಯಕ್ಕೆ (Mandya) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಗಮಿಸಲಿದ್ದು, ಈಗಾಗಲೇ ಸಿದ್ಧತೆ ಕೂಡ ಅಂತಿಮ ಹಂತದಲ್ಲಿದೆ. ಈ ನಡುವೆ ಸರ್ಕಾರಗಳ ವಿರುದ್ಧ ರೈತರ ಆಕ್ರೋಶ ಹಿನ್ನೆಲೆ ಕೇಂದ್ರ ಗೃಹ ಸಚಿವರ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಿಂದ ಯಲಹಂಕದ ಏರ್ಬೇಸ್ನಿಂದ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿ ಮಂಡ್ಯದ ಭೈರಾಪಟ್ಟಣದ ಹೆಲಿಪ್ಯಾಡ್ಗೆ ಅಮಿತ್ ಶಾ ಬಂದಿಳಿಯಬೇಕಿತ್ತು. ಈ ಹಿಂದೆ ಇದೇ ರೀತಿ ಕಾರ್ಯಕ್ರಮದ ಸಿದ್ಧತೆಯಿತ್ತು. ಆದರೆ ಇದೀಗ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಹುಲಿಗೆರೆಪುರಕ್ಕೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ಹುಲಿಗೆರೆಪುರ ಹೆಲಿಪ್ಯಾಡ್ನಿಂದ ರಸ್ತೆ ಮೂಲಕ ಗೆಜ್ಜಲಗೆರೆಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ. ಗೆಜ್ಜಲಗೆರೆಯಿಂದ ರಸ್ತೆ ಮಾರ್ಗವಾಗಿ ಮಂಡ್ಯಕ್ಕೆ ಬರಬೇಕಿದ್ದ ಅಮಿತ್ ಶಾ, ರೈತರ ಹೋರಾಟ ಹಿನ್ನೆಲೆ ರಸ್ತೆ ಬದಲು ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸಿ ಹೆಲಿಕಾಪ್ಟರ್ ಮೂಲಕ ಪಿಇಟಿ ಗ್ರೌಂಡ್ಗೆ ಬಂದು ಅಮಿತ್ ಶಾ ವಾಪಸ್ಸಾಗುವ ಬಗ್ಗೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವೆಂಬಂತೆ ಪಿಇಟಿ ಗ್ರೌಂಡ್ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!
ಕಳೆದ 52 ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸ್ತಿದ್ದ ರೈತರ ಮೇಲೆ ನಿನ್ನೆ ಪೊಲೀಸರು ದೌರ್ಜನ್ಯ ಎಸಗಿರೋದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ರೈತರು ಧರಣಿ ನಡೆಸ್ತಿದ್ದ ಪೆಂಡಾಲ್ ಧ್ವಂಸ ಮಾಡಿದ್ದ ಪೊಲೀಸರು, ಮಹಾತ್ಮಗಾಂಧಿ, ಅಂಬೇಡ್ಕರ್, ರೈತ ನಾಯಕರ ಫೋಟೋ ಕೆಳಗೆ ಎಸೆದು ಅಪಮಾನ ಮಾಡಿದ್ದರು. ಪೊಲೀಸರ ಕೃತ್ಯವನ್ನು ಸೆರೆ ಹಿಡಿಯುತ್ತಿದ್ದ ರೈತರನ್ನು ಬಂಧಿಸಿದ್ದರು. ಆ ಬಳಿಕ ಮಂಡ್ಯ ಪೊಲೀಸರ ದೌರ್ಜನ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಅಮಿತ್ ಶಾ ಮಂಡ್ಯ ಪ್ರವಾಸದ ವೇಳೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು
ಮಂಡ್ಯ ವಿವಿಯಲ್ಲಿ (Mandya VV) ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದ್ದು, ಮಂಡ್ಯ ನಗರದಲ್ಲಿ 1, ಮದ್ದೂರು ತಾಲೂಕಿನಲ್ಲಿ 1 ಹೆಲಿಪ್ಯಾಡ್, ಮಂಡ್ಯದ ಪಿಇಎಸ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ 1 ಹೆಲಿಪ್ಯಾಡ್, ಮದ್ದೂರು ತಾಲೂಕಿನ ಭೈರಾಪಟ್ಟಣದಲ್ಲಿ 1 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.