ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅನಂತ್ಕುಮಾರ್ ಅವರಿಗೆ ದೂರವಾಣಿಯಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ರಾಜರಾಜೇಶ್ವರಿ ನಗರದ ಬಳಿಕ ಇಂದು ಜಯನಗಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸೋಲು ಬಿಜೆಪಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ. ಆದರೂ ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಕೇಂದ್ರ ಸಚಿವರು ಅಲ್ಪ ಮತಗಳಿಂದ ಸೋಲು ಕಂಡಿದೆ ಅಂತಾ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ನೇರವಾಗಿ ದೂರವಾಣಿ ಮೂಲಕ ಅನಂತಕುಮಾರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ದೂರವಾಣಿಯಲ್ಲಿ ಅಮಿತ್ ಶಾ ಹೇಳಿದ್ದೇನು?:
1. ಸ್ಥಳೀಯ ಕಾರ್ಪೋರೇಟರ್ಗಳನ್ನು ನಿಭಾಯಿಸುವಲ್ಲಿ ವಿಫಲ.
2. ಟಿಕೆಟ್ ಸಿಗದೇ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದ ಕಾರ್ಪೋರೇಟರ್ಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ.
3. ಈ ಹಿಂದೆ ನಡೆಸಿದ್ದ ಚುನಾವಣಾ ರಣತಂತ್ರಗಳನ್ನು ಈ ಚುನಾವಣೆಯಲ್ಲಿ ಯಾಕೆ ಅಳವಡಿಸಿಲ್ಲ.
4. ಶಾಸಕರಾಗಿದ್ದ ವಿಜಯ್ ಕುಮಾರ್ ಸಾವಿನ ಅನುಕಂಪದ ಅಲೆಯಲ್ಲಿ ಸುಲಭವಾಗಿ ಗೆಲ್ಲಬಹುದಿತ್ತು.
5. ಆದರೆ ವೈಯಕ್ತಿಕ ಪ್ರತಿಷ್ಠೆ, ಪ್ರಾದೇಶಿಕ ನಾಯಕರ ಹೊಂದಾಣಿಕೆ ಕೊರೆತೆಯಿಂದ ನಮಗೆ ಸೋಲಾಗಿದೆ.
6. ರಾಜರಾಜೇಶ್ವರಿ ಬಳಿಕ ಜಯನಗರ ಕ್ಷೇತ್ರದ ಸೋಲಿನಿಂದಲೂ ಪಕ್ಷಕ್ಕೆ ಮುಜುಗರ ಆಗಿದೆ.
ಜಯನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಡಿಯಲ್ಲಿಯೇ ಬರುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅನಂತಕುಮಾರ್ ಜಯನಗರದಲ್ಲಿ ಬಿಜೆಪಿ ಸೋಲಿನ ಬಳಿಕ ಫೇಸ್ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಜಯನಗರ ಸೋಲನ್ನು ನಾವು ಸ್ವೀಕರಿಸುತ್ತೇವೆ. ಆದರೂ ನಮ್ಮ ಅಭರ್ಥಿ ಪ್ರಹ್ಲಾದ್ ಬಾಬು ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಕೊನೆ ಕ್ಷಣದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರಿಂದ ನಮ್ಮ ಸೋಲು ಆಗಿದೆ. ಚುನಾವಣೆಗಾಗಿ ಕೆಲಸ ಮಾಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ ಅಂತಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.