ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಕಮಲ ಪಾಳಯ ಪಂಚ ದಿಗ್ಬಂಧನಕ್ಕೆ ಮುಂದಾಗಿದ್ದು, ಇದರಿಂದ ಸರ್ಕಾರದ ಪ್ರಭಾವಿ ಪಂಚ ನಾಯಕರನ್ನು ಕಟ್ಟಿ ಹಾಕುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಾರು ಪಂಚ ನಾಯಕರು?
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ರೇವಣ್ಣ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ, ಮಂಡ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಸನದಲ್ಲಿ ಹೆಚ್.ಡಿ.ರೇವಣ್ಣ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರು ಸ್ಪರ್ಧಿಸುವ ಕ್ಷೇತ್ರದಲ್ಲಿ ಗೌಡರನ್ನೇ ಕಟ್ಟಿಹಾಕುವ ತಂತ್ರದಲ್ಲಿ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.
ಮಂಡ್ಯದಲ್ಲಿ ಸುಮಲತಾರಿಗೆ ಒಳಬೆಂಬಲ ನೀಡುವ ಮೂಲಕ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡುವುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯೋಗೇಶ್ವರ್ ಪುತ್ರಿ ನಿಶಾರನ್ನು ಕಣಕ್ಕಿಳಿಸುವ ಮೂಲಕ ಡಿಕೆಶಿಗೆ ಟಾಂಗ್ ಕೊಡುವುದು. ಹಾಸನದಲ್ಲಿ ಎ.ಮಂಜು ಕಣಕ್ಕಿಳಿಸುವ ಮೂಲಕ ರೇವಣ್ಣರನ್ನ ಇಕ್ಕಟ್ಟಿಗೆ ಸಿಲುಕಿಸುವುದು. ಮೈಸೂರಿನಲ್ಲಿ ಮೈತ್ರಿ ನಾಯಕರ ಅಸಮಧಾನ ಬಳಸಿಕೊಳ್ಳುವ ಮೂಲಕ ಸಿದ್ದರಾಮಯ್ಯರಿಗೆ ಶಾಕ್ ನೀಡಲು ಬಿಜೆಪಿ ಎಲ್ಲ ರೀತಿಯಿಂದಲೂ ಸಿದ್ಧಗೊಳ್ಳುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಅಮಿತ್ ಶಾ ರೂಪಿಸಿರುವ ಪ್ಲಾನ್ಗೆ ಮೈತ್ರಿ ನಾಯಕರು ಯಾವ ರೀತಿ ಟಕ್ಕರ್ ನೀಡುತ್ತಾರೆ? ಅಮಿತ್ ಶಾ ಪ್ಲಾನ್ ರಾಜ್ಯದಲ್ಲಿ ವರ್ಕೌಟ್ ಆಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.