ಬೆಂಗಳೂರು: ಆದಿಚುಂಚನಗಿರಿ ಮಠದ (Adichunchanagiri Mutt) ಹಿರಿಯ ಶ್ರೀಗಳ ಸೇವಾ ಕೈಂಕರ್ಯ ಪರಂಪರೆಯನ್ನು ನಿರ್ಮಲಾನಂದನಾಥ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶ್ಲಾಘಿಸಿದ್ದಾರೆ.
ನೆಲಮಂಗಲ (Nelamangala) ಬಳಿಯ ನಗರೂರಿನಲ್ಲಿ ಶ್ರೀ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬಿಜಿಎಸ್ ಎಂಸಿಎಚ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು (BGS Medical College and Hospital) ಉದ್ಘಾಟನೆ ಮಾಡಿ ಅವರು ಮಾತನಾಡಿದರು. 200 ಕೋಟಿ ರೂ. ವೆಚ್ಚದಲ್ಲಿ ಆದಿಚುಂಚನಗಿರಿ ಸಂಸ್ಥಾನ ನೂತನ ಕಾಲೇಜು ಮತ್ತು ಆಸ್ಪತ್ರೆ ನಿರ್ಮಿಸಿದೆ. 1000 ಬೆಡ್ ಉಳ್ಳ ಸೂಪರ್ಸ್ಪೆಷಾಲಿಟಿ ಆಸ್ರತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಮತ್ತಷ್ಟು ಸಂತೋಷ. ಇನ್ನೂ ಅನೇಕ ಸೇವಾ ಕಾರ್ಯಗಳನ್ನು ಬಿಜಿಎಸ್ ಟ್ರಸ್ಟ್ ಕೈಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ – ತಡರಾತ್ರಿ ರೆಬೆಲ್ ನಾಯಕ ಸಭೆ
ಶ್ರೀಗಳು, ಕಳೆದ ಅನೇಕ ವರ್ಷಗಳಿಂದ ಈ ಪುಣ್ಯ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು. ಇದೇ ವೇಳೆ, ಮಹಾನ್ ಭಾಷೆ ಕನ್ನಡದಲ್ಲಿ ಮಾತನಾಡಲು ನನಗೆ ಆಗದೇ ಇರುವುದಕ್ಕೆ ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ನೆಲಮಂಗಲ ಭಾಗಕ್ಕೆ ಈ ಆಸ್ಪತ್ರೆ ಎಷ್ಟು ಅಗತ್ಯವೆಂಬುದನ್ನು ಹೇಳಿದರು. ಅಮಿತ್ ಶಾ ಹಾಗೂ ಹೆಚ್,ಡಿ ಕುಮಾರಸ್ವಾಮಿಯವರ ಕಾರ್ಯಬದ್ಧತೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ವಿಪಕ್ಷ ನಾಯಕ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮಾದಾರ ಚನ್ನಯ್ಯ ಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ವಿಶ್ವನಾಥ್, ನೆಲಮಂಗಲ ಶಾಸಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಆರನೇ ಬಾರಿಗೆ ಆಕ್ಸಿಯಮ್ ಮಿಷನ್ 4 ಮುಂದೂಡಿಕೆ- ಶುಭಾಂಶು ಅಂತರಿಕ್ಷ ಯಾನ ಮತ್ತೆ ವಿಳಂಬ