ಬೆಂಗಳೂರು: ಕರ್ನಾಟಕವನ್ನು ಕೈವಶ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂತ್ರಾಲೋಚನೆ ತೀವ್ರಗೊಳಿಸಿದ್ದು, ಮಂಗಳವಾರ ರಾತ್ರಿವರೆಗೂ ಖಾಸಗಿ ರೆಸಾರ್ಟ್ ನಲ್ಲಿ ಸಭೆ ನಡೆಸಿದ್ರು. ನಾವು ಕೊಟ್ಟ ಕೆಲಸವನ್ನು ಸೂಚನೆ ಎಂದು ಭಾವಿಸದೇ ನಿಮ್ಮ ಜವಾಬ್ದಾರಿ ಎಂದು ಭಾವಿಸಿ ನಿರ್ವಹಿಸಿ. ಮೈ ಚಳಿ ಬಿಟ್ಟು ಕೆಲ್ಸ ಮಾಡಿ ಅಂತ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿ ನಮ್ಮದೇ ಸರ್ಕಾರ ತಾನಾಗಿಯೇ ಬರುತ್ತದೆ. ನೀವು ಅದ್ರ ಬಗ್ಗೆ ಯೋಚನೆ ಮಾಡ್ಬೇಡಿ. ನಾನು ಇದೊಂದು ಚುನಾವಣೆ ನೋಡಿದವನಲ್ಲ. ಕೆಲವು ಚುನಾವಣೆಯಲ್ಲಿ ಗೆದಿದ್ದೇವೆ, ಸೋತಿದ್ದೇವೆ. ಸರ್ವೆ ವರದಿಗಳ ಬಗ್ಗೆ ಆತಂಕ ಬೇಡ. ಮಾರ್ಚ್ 10ರೊಳಗೆ ಚುನಾವಣಾ ಸಿದ್ಧತೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಒಂದು ವೇಳೆ ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ಹೇಳಿ, ಬೇರೆಯವರನ್ನು ನಿಯೋಜಿಸುತ್ತೆವೆ. ಗುಜರಾತ್ನಲ್ಲಿ ನಮ್ಮ ಸೂಚನೆಯನ್ನು ಪಾಲಿಸಿದವರು ಗೆದ್ದಿದ್ದಾರೆ. ಸೋಮಾರಿತ ಮಾಡಿದವರು ಮನೆಗೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸ್ತೇವೆ. ಗೆಲ್ಲಬೇಕು ಅಂದ್ರೆ ನೀವು 23 ಸೂತ್ರಗಳನ್ನು ಅನುಷ್ಠಾನಕ್ಕೆ ತನ್ನಿ ಅಷ್ಟೇ ಅಂತ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.
23 ಸೂತ್ರಗಳನ್ನು ಹೇಳಿದ ಬಳಿಕ ಮಹಿಳಾ ಹಾಸ್ಟೆಲ್, ಸಂಘ ಸಂಸ್ಥೆಗಳಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರ ವಾಸ್ತವ್ಯವನ್ನೂ ಸೇರಿಸುವಂತೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ತಿಳಿಸಿದ್ದಾರೆ. ಹೇಳಿದ ಕೆಲಸ ಮೊದಲು ಮಾಡಿ. ಯಾವುದನ್ನು ಸೇರಿಸಬೇಕು, ಬಿಡಬೇಕು ಅನ್ನೋದು ನನಗೆ ಗೊತ್ತು ಅಂತಾ ಅಮಿತ್ ಶಾ ಗರಂ ಆದ್ರು ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಅಮಿತ್ ಶಾ ನೀಡಿರುವ ಆ 23 ಸೂತ್ರಗಳು ಈ ಕೆಳಗಿನಂತಿವೆ.
ಅಮಿತ್ ಶಾ ನೀಡಿರುವ 23 ಸೂತ್ರಗಳ ಟಾಸ್ಕ್ ಏನು…?
1. ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ.
2. ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ.
3. ಮಂಡಳದ ವಿಸ್ತೃತ ಸಭೆ ನಡೆಸಲು ಸೂಚನೆ.
4. ಶಕ್ತಿಕೇಂದ್ರದ ಪ್ರಮುಖರು ಜನವರಿ ಮತ್ತು ಫೆಬ್ರುವರಿ ಯಲ್ಲಿ ಎರಡು ದಿನ ಪ್ರವಾಸ ಕಡ್ಡಾಯ.
5. 2008, 2013, 2014 ರ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳ ಎ, ಬಿ, ಸಿ ಎಂದು ವರ್ಗಿಕರಸಿಬೇಕು.
6. ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.
7. ಎಸ್ಇ, ಎಸ್ಟಿ, ಓಬಿಸಿ ಸಮುದಾಯದವರನ್ನು ಕನಿಷ್ಠ 10 ಹೊಸ ಸದಸ್ಯತ್ವ ಮಾಡಬೇಕು.
8. ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.
9. ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು.
10. ಪಂಚಾಯಿತಿ ಚುನಾವಣೆಯಲ್ಲಿ ಸೋತವರ ಪಟ್ಟಿ ಸಿದ್ಧಪಡಿಸಬೇಕು, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು
11. ಸ್ಮಾರ್ಟ್ ಫೋನ್ ಇರುವವರ ಪಟ್ಟಿ ತಯಾರಿಸಬೇಕು.
12. ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.
13. ಪ್ರತಿ ಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆ ಬರಹ 5 ಸ್ಥಳದಲ್ಲಿ ಬರೆಯಬೇಕು.
14. ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕು, ಮಾರ್ಚ್ ನಲ್ಲಿ ಬೈಕ್ ರ್ಯಾಲಿ ತೆರಳಿ ಚಾರ್ಜ್ ಶೀಟ್ ಹಂಚಬೇಕು.
15. ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.
16. ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ.
17. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು.
18. ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು.
19. ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು.
20 ವಾಟ್ಸಪ್ ಗ್ರುಪ್ ಗಳ ರಚನೆ.
21. ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.
22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.
23. ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.