– ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಪರ ಅಮಿತ್ ಶಾ ಅಬ್ಬರದ ಪ್ರಚಾರ
ಬೆಂಗಳೂರು: ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಮಂಗಳವಾರ ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದರು. ರಾತ್ರಿ 9 ಗಂಟೆಗೆ ಬೊಮ್ಮನಹಳ್ಳಿ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕೈಮುಗಿದ ಅಮಿತ್ ಶಾ ಪ್ರಚಾರ ವಾಹನ ಹತ್ತಿ ರೋಡ್ ಶೋ ನಡೆಸಿದರು.
ಬೊಮ್ಮನಹಳ್ಳಿ ಸರ್ಕಲ್ನಿಂದ ಸೈಂಟ್ ಫ್ರ್ಯಾನ್ಸಿಸ್ ಶಾಲೆವರೆಗೆ ಎರಡುಕಾಲು ಕಿ.ಮೀವರೆಗೆ ರ್ಯಾಲಿ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಜನ, ಕಾರ್ಯಕರ್ತರು ನೆರೆದಿದ್ದರು. ರೋಡ್ ಶೋ ವೇಳೆ ಅಮಿತ್ ಶಾ ವಾಹನದತ್ತ ಹೂಮಳೆಯನ್ನೇ ಕಾರ್ಯಕರ್ತರು ಸುರಿಸಿದರು. ಅಮಿತ್ ಶಾರನ್ನು ಲೇಸರ್ ಲೈಟ್ ಬರಹದ ಮೂಲಕ ಸ್ವಾಗತ ಕೋರಿದ್ದು, ಸಾಂಸ್ಕೃತಿಕ ಕಲಾತಂಡಗಳ ನೃತ್ಯ ಗಮನ ಸೆಳೆಯಿತು.
ಈ ವೇಳೆ ‘ಪಬ್ಲಿಕ್ ಟಿವಿ’ ಜೊತೆ ಅಮಿತ್ ಶಾ ಮಾತನಾಡಿ, ಈ ಸಲ ಬಿಜೆಪಿ ಜೆಡಿಎಸ್ ಎಲ್ಲ ಕ್ಷೇತ್ರ ಗೆಲ್ತೇವೆ ಎಂದರು. ಕಾಂಗ್ರೆಸ್ನಿಂದ ಗೋಬ್ಯಾಕ್ ಅಮಿತ್ ಶಾ, ಇಂದಿನ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತಾಡುವ ಅವಕಾಶ ಇದೆ. ಅವರೂ ಮಾತಾಡ್ತಿದ್ದಾರೆ, ಮಾತಾಡಲಿ ಎಂದು ಹೇಳಿದರು.
ಚೊಂಬು ವಾರ್ ಕುರಿತು ಮಾತನಾಡಿ, ಆ ಚೊಂಬು ಅವರಿಗೆ ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ. ಅವರಿಗೆ ಒಂದೂ ಸ್ಥಾನ ಗೆಲ್ಲುವ ವಿಶ್ವಾಸ ಇಲ್ಲ. ಅವರು ತೋರಿಸ್ತಿರುವ ಖಾಲಿ ಚೊಂಬು ಫಲಿತಾಂಶ ದಿನ ಅವರ ಪರಿಸ್ಥಿತಿ ಏನಿರುತ್ತೆ ಅಂತ ಈಗಲೇ ತೋರಿಸ್ತಿದೆ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ನೇಹಾ ಹಿರೇಮಠ್ ಪ್ರಕರಣದಲ್ಲಿ ಬಿಜೆಪಿ ಲಾಭ ಮಾಡ್ಕೊಳ್ಳಲು ಹವಣಿಸ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಗರಂ ಆದ ಅಮಿತ್ ಶಾ, ನೋಡಿ.. ಘಟನೆ ಆಗಿದೆ ತಾನೇ? ಕೊಲೆ ಆಗಿದೆ ತಾನೇ? ಇದರ ವಿರುದ್ಧ ದನಿ ಎತ್ತೋದು ಪ್ರತಿಪಕ್ಷವಾದ ನಮ್ಮ ಕೆಲಸ ಅಲ್ವಾ? ಇದನ್ನು ನಾವು ಖಂಡಿಸಬಾರದಾ? ಏನ್ ಮಾತಾಡ್ತಿದ್ದಾರೆ ಅವರು ಎಂದು ಕಿಡಿಕಾರಿದರು.
ರೋಡ್ ಶೋನಲ್ಲಿ ಅಮಿತ್ ಶಾ ಅವರಿಗೆ ಅಭ್ಯರ್ಥಿ ತೇಜಸ್ವಿ ಸೂರ್ಯ, ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ಸಿ ಕೆ ರಾಮಮೂರ್ತಿ ಸಾಥ್ ನೀಡಿದರು.