ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೂರು ಬಾರಿ ಬರಲಿ ಅಥವಾ ಪ್ರಧಾನಿ ಮೋದಿ ನೂರು ಬಾರಿ ಬರಲಿ, ಮುಂದಿನ ಬಾರಿ ಅಧಿಕಾರಕ್ಕೆ ಬರೋರು ನಾವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾನಾಡಿದ ಅವರು, ಮಾಜಿ ಸಚಿವ ಎಂ.ಸಿ.ನಾಣಯ್ಯ ಇಂದು ಕಾಂಗ್ರೆಸ್ ಸೇರಲಿದ್ದಾರೆ. ಇದರಿಂದ ನಮ್ಮ ಪಕ್ಷದ ಬಲ ಇನ್ನಷ್ಟು ಹೆಚ್ಚಲಿದೆ. ಶನಿವಾರ ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪಕ್ಷ ಸೇರಿದ್ದಾರೆ ಎಂದು ಹೇಳಿದ್ರು.
ಕರಾವಳಿಯನ್ನು ಕೋಮುವಾದದ ಕೇಂದ್ರ ಮಾಡಲು ಹೊರಟಿದ್ದರು. ಅಲ್ಲಿಯೂ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದೆ. ಕಳಂಕಿತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ರೆ ಜನಕ್ಕೆ ಅರ್ಥ ಆಗಲ್ವ ಅಂತ ಪ್ರಶ್ನಿಸಿದ್ದಾರೆ.
ಅಥಣಿಯಿಂದ ಹಿಡಿದು ಚಾಮರಾಜನಗರ, ಮಂಡ್ಯವರೆಗೆ ಎಲ್ಲ ಕಡೆಯೂ ನಮಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನ ನಮ್ಮ ಪರವಾಗಿದ್ದಾರೆ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ. ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಜನ ನಮ್ಮ ಪರವಾಗಿದ್ದಾರೆ ಎಂದೇ ವರದಿಗಳು ಹೇಳುತ್ತಿವೆ. ಗುಪ್ತಚರ ಮಾಹಿತಿಯೂ ಅದನ್ನೇ ಹೇಳಿದೆ. ಇದರಲ್ಲಿ ವಿಶೇಷ ಏನಿದೆ ಜನ ಕೆಲಸ ಮಾಡುವವರಿಗೆ ಬೆಂಬಲ ನೀಡುತ್ತಾರೆ ಅಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ರು.
ಶಾಸಕರಿಗೆ ಸಿಎಂ ಸಂತಾಪ: ಬೇಲೂರು ಶಾಸಕ ರುದ್ರೇಶ್ ಗೌಡ ಸಜ್ಜನ ರಾಜಕಾರಣಿ. ಯಾವತ್ತೂ ಜೋರಾಗಿ ಮಾತನಾಡಿದವರಲ್ಲ. ಆದ್ರೆ ಜನರ ಕೆಲಸಕ್ಕಾಗಿ ಸದಾ ಹಂಬಲಿಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ರಾಜ್ಯಸಭಾ ಚುನಾವಣಾ ವೇಳೆ ಅನಾರೋಗ್ಯ ಉಂಟಾದಾಗ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅವರು ಕೋಮದಲ್ಲಿದ್ದ ಕಾರಣ ಮಾತನಾಡಿಸಲು ಸಾಧ್ಯವಾಗಲಿಲ್ಲ. ಅವರ ಅಗಲಿಕೆ ಪಕ್ಷಕ್ಕೆ ನಷ್ಟವಾಗಿದೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇದೇ ವೇಳೆ ಶಾಸಕರಿಗೆ ಸಂತಾಪ ಸೂಚಿಸಿದ್ರು.