ರಾಂಚಿ: ಜಾರ್ಖಂಡ್ ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೆನ್ ಅವರ ಸದಸ್ಯತ್ವ ರದ್ದತಿ ಕುರಿತು ತೀವ್ರತರವಾದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸೊರೆನ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ ಶಾಸಕರು ಶನಿವಾರ ರೆಸಾರ್ಟ್ಗಳಿಗೆ ತೆರಳಿದ್ದಾರೆ.
ಸೊರೆನ್ ಹಾಗೂ ಆಡಳಿತಾರೂಢ ಶಾಸಕರು 3 ಬಸ್ಗಳಲ್ಲಿ ಕೆಲವು ಅಜ್ಞಾತ ಸ್ಥಳಗಳಿಗೆ ತೆರಳುತ್ತಿರುವುದು ಕಂಡುಬಂದಿದೆ. ರಾಂಚಿಯಿಂದ 40 ಕಿ.ಮೀ ದೂರವಿರುವ ಕುಂತಿ ಜಿಲ್ಲೆಯ ಲಟ್ರಟು ಅಣೆಕಟ್ಟು ಬಳಿಯ ಅತಿಥಿ ಗೃಹಕ್ಕೆ ತೆರಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಭಾರತದ 49ನೇ CJI ಆಗಿ ಯುಯು ಲಲಿತ್ ಪ್ರಮಾಣ ವಚನ ಸ್ವೀಕಾರ
ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ಜೆಡಿ ಮೈತ್ರಿ ಸರ್ಕಾರದ ಶಾಸಕರು 3 ಬಸ್ಗಳಲ್ಲಿ ತೆರಳಿರುವುದು ಕಂಡುಬಂದಿದ್ದು, ಅವರಿಗೆ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಹೇಮಂತ್ ಸೊರೆನ್ ನಿವಾಸದಲ್ಲಿ ಮೊದಲಿಗೆ ಶಾಸಕರೊಂದಿಗೆ 3 ಬಾರಿ ಸರಣಿ ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮಾತ್ರವಲ್ಲದೇ ಶಾಸಕರನ್ನು ಪಶ್ಚಿಮ ಬಂಗಾಳ ಅಥವಾ ಛತ್ತೀಸ್ಗಢಕ್ಕೆ ಶಿಫ್ಟ್ ಮಾಡಲಾಗುತ್ತದೆ ಎಂದು ಮೊದಲಿಗೆ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: 1,186 ಹೊಸ ಕೇಸ್ – ಮೈಸೂರಲ್ಲಿ ನೂರರ ಗಡಿ ದಾಟಿದ ಕೊರೊನಾ
ಇದೀಗ ಎಲ್ಲಾ ಶಾಸಕರೂ ಲಟ್ರಟು ಡ್ಯಾಂ ಪ್ರದೇಶದಲ್ಲಿರುವ ರೆಸಾರ್ಟ್ನಲ್ಲಿ ತಂಗಲಿದ್ದಾರೆ ಎನ್ನಲಾಗುತ್ತಿದ್ದು, ಇಡೀ ಪ್ರದೇಶದಲ್ಲಿ ಭಾರೀ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.