ನವದೆಹಲಿ: ʼಅಗ್ನಿಪಥ್ʼ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಪ್ರತಿಭಟನಾಕಾರರ ಮನೆಗಳ ಮೇಲೆ ನಿಮ್ಮ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದೀರಿ ಎಂದು ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸರ್ಕಾರಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರ ತಪ್ಪು ನಿರ್ಧಾರದಿಂದ ಯುವಸಮುದಾಯ ಬೀದಿಗಳಿದಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಎಷ್ಟು ಪ್ರತಿಭಟನಾಕಾರರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದೀರಿ ಎಂದು ಪ್ರಶ್ನಿಸಿರುವ ಓವೈಸಿ, ಯಾರ ಮನೆಯೂ ನೆಲಸಮವಾಗಬಾರದು ಎಂಬುದು ನಮ್ಮ ಬಯಕೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ
ನಾನು ಮೋದಿ ಅವರನ್ನು ಕೇಳಬಯಸುತ್ತೇನೆ. ಮುಸ್ಲಿಮರು ನಿಮ್ಮ ಮಕ್ಕಳಲ್ಲವೇ? ನಾವು ಕೂಡ ಈ ದೇಶದ ಮಕ್ಕಳು. ನೀವು ನಮ್ಮೊಂದಿಗೆ ಮಾತನಾಡಿ. ಕಳೆದ ಶುಕ್ರವಾರವೇ ನಮ್ಮೊಂದಿಗೆ ನೀವು ಮಾತನಾಡಬೇಕಿತ್ತು ಎಂದು ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಮೂಲಕ ಗಲಭೆ ಸೃಷ್ಟಿಸಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಅನೇಕ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಯಿತು. ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಈ ಕ್ರಮಕೈಗೊಂಡಿದ್ದರು. ಇದಕ್ಕೂ ಮೊದಲು ದೆಹಲಿಯಲ್ಲೂ ಬಿಜೆಪಿ ಆಡಳಿತವಿರುವ ಪಾಲಿಕೆ ವ್ಯಾಪ್ತಿಯಲ್ಲಿ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಲಾಗಿತ್ತು. ಇದನ್ನೂ ಓದಿ: ಅಗ್ನಿಫಥ್ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ