ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಪ್ರಕ್ಷುಬ್ದ ವಾತಾವರಣ ಭಾರತದ ಮೇಲೂ ಬೀಳಲಿದೆ. ಇರಾನ್-ಅಮೆರಿಕ ಕ್ಷಿಪ್ರ ದಾಳಿ ಯುದ್ಧದ ಕಡೆ ತಿರುಗಿದ್ದರೆ, ಆರ್ಥಿಕ ಹೊಡೆತ ಎದುರಾಗಲಿದೆ ಎಂದು ವಿಂಗ್ ಕಮಾಂಡರ್ ಅತ್ರಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ ಅವರು, ಭಾರತದ ಆರ್ಥಿಕತೆಯ ಮೇಲೆ ಈ ಬೆಳವಣಿಗೆ ಹೆಚ್ಚು ಪರಿಣಾಮ ಬೀರಲಿದೆ. ಸದ್ಯ ಭಾರತ ಆರ್ಥಿಕವಾಗಿ ಕುಂಟುತ್ತಾ ಸಾಗಿದೆ. ಎರಡು ರಾಷ್ಟ್ರಗಳ ನಡುವೆ ಯುದ್ಧ ಪರಿಸ್ಥಿತಿ ಎದುರಾದರೆ ಇಡೀ ಪ್ರಪಂಚಕ್ಕೆ ಕಷ್ಟ ಎದುರಾಗುತ್ತದೆ. ಕಚ್ಚಾ ತೈಲದ ಬೆಲೆ ಭಾರೀ ದುಬಾರಿಯಾಗಲಿದೆ. ಯುದ್ಧ ಕಾಲ ಹಣಕಾಸಿನ ವೆಚ್ಚ ಹೆಚ್ಚಾಗಲಿದ್ದು, ಆಗ ಇರಾನ್ ತನ್ನ ರಫ್ತಿನ ಮೇಲಿನ ದರ ಏರಿಕೆ ಮಾಡಲಿದೆ. ಇದರ ಪರಿಣಾಮ ತೈಲ ಬೆಲೆಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಹೀಗಾಗಿ ಇದನ್ನ ತಪ್ಪಿಸಲು ಪ್ರಧಾನಿ ಮೋದಿ ಶಾಂತಿದೂತನಂತೆ ಪ್ರವೇಶ ಮಾಡಬೇಕಿದೆ. ಇರಾನ್-ಅಮೆರಿಕ ಎರಡು ರಾಷ್ಟ್ರಗಳಲ್ಲಿ ಯಾರದ್ದು ತಪ್ಪಿದೆ ಎನ್ನುವುದನ್ನು ಒಪ್ಪಿಕೊಂಡರೆ ಅವರು ದೊಡ್ಡವರಾಗುತ್ತಾರೆ. ಸದ್ಯ ಭಾರತದ ಮಾತಿಗೆ ಬಾರೀ ಬೆಲೆಯಿದ್ದು, ಕೂಡಲೇ ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.