ಲಕ್ನೋ: ದೇಶದಲ್ಲೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಸುಗಳಿಗೆ ಅಂಬುಲೆನ್ಸ್ ಸೇವೆಯನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ರಾಜ್ಯದ ಪಶುಸಂಗೋಪನೆ, ಮೀನುಗಾರಿಕೆ, ಡೈರಿ ಅಭಿವೃದ್ಧಿ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಅವರು ಈ ಯೋಜನೆ ಕುರಿತಾಗಿ ಮಾತನಾಡಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಸುಗಳಿಗೆ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರ ಅಂಬುಲೆನ್ಸ್ ಸೇವೆಯನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?
ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯಡಿ 515 ಅಂಬುಲೆನ್ಸ್ ಕಾರ್ಯನಿರ್ವಹಣೆ ಮಾಡಲಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಂತಹ ಯೋಜನೆ ಜಾರಿಗೊಳ್ಳುತ್ತಿದೆ. 112 ತುರ್ತು ಸೇವೆ ನಂಬರ್ ನಂತೆಯೇ ಈ ಸೇವೆಯೂ ಕಾರ್ಯನಿರ್ವಹಣೆ ಮಾಡಲಿದ್ದು, ತೀವ್ರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಸುಗಳು ಬೇಗ ಚೇತರಿಸಿಕೊಳ್ಳುವುದಕ್ಕೆ ತ್ವರಿತವಾದ ಚಿಕಿತ್ಸೆ ಲಭ್ಯವಾಗಲು ಈ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ
ಡಿಸೆಂಬರ್ನಲ್ಲಿ ಇದಕ್ಕಾಗಿ ಪ್ರತ್ಯೇಕ ಕಾಲ್ ಸೆಂಟರ್ ಪ್ರಾರಂಭವಾಗಲಿದ್ದು, ಕರೆ ಮಾಡಿದ 15-20 ನಿಮಿಷಗಳಲ್ಲಿ ಅಂಬುಲೆನ್ಸ್ ನಿಗದಿತ ಸ್ಥಳಕ್ಕೆ ಆಗಮಿಸಲಿದೆ. ಇದೇ ವೇಳೆ ಉತ್ತಮ ಗುಣಮಟ್ಟದ ವೀರ್ಯ ಹಾಗೂ ಭ್ರೂಣ ಕಸಿ ತಂತ್ರಜ್ಞಾನದ ಮೂಲಕ ರಾಜ್ಯದಲ್ಲಿ ತಳಿ ಸುಧಾರಣೆ, ಅಭಿವೃದ್ಧಿ ಯೋಜನೆಗೂ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಭ್ರೂಣ ಕಸಿ ತಂತ್ರಜ್ಞಾನವು ರಾಜ್ಯದಲ್ಲಿ ಕ್ರಾಂತಿ ಮಾಡಲಿದೆ. ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವಂತೆ ಮಾಡಲಿದೆ. ವಯಸ್ಸಾದ ಹಸುಗಳು ಅಧಿಕ ಹಾಲು ಕೊಡಲಾರಂಭಿಸಿದರೆ ಸಾಕುವವರು ಅವುಗಳನ್ನು ಬೀದಿಗೆ ಬಿಡುವುದಿಲ್ಲ. ಇದರಿಂದ ಬಿಡಾದಿ ಹಸುಗಳ ಸಮಸ್ಯೆಯೂ ತಾನಾಗಿಯೇ ನಿಲ್ಲುತ್ತದೆ. ಯೋಗಿ ಆದಿತ್ಯನಾಥ ಅವರ ನೇತೃತ್ವದ ಸಕಾರದವು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಡಾಡಿ ದನಗಳಿಗೆ ಆಶ್ರಯ ಕಲ್ಪಿಸಲು ಅನುದಾನ ನೀಡುತ್ತಿದೆ. ಈ ಹಿಂದಿನ ಯಾವುದೇ ಸರ್ಕಾರವು ಇಂತಹ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.