ಬೆಂಗಳೂರು: ಸುಗಮ ಸಂಚಾರಕ್ಕೆ ವಾಹನಗಳಿಗಿಂತ ಉತ್ತಮ ರಸ್ತೆಗಳು ಸಹ ಪೂರಕವಾಗಿರಬೇಕು. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ನಿರ್ವಹಣೆ ಮಾಡುವ ಕಂಪನಿಗಳು, ನಿಯಮಗಳನ್ನು ಗಾಳಿಗೆ ತೂರಿ ಮನುಷ್ಯನ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.
ನೆಲಮಂಗಲ ತಾಲೂಕಿನಲ್ಲಿ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ, ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಈ ಹೆದ್ದಾರಿಗಳಲ್ಲಿ ಮೂರು ಟೋಲ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದೆ. ರಸ್ತೆ ಸುರಕ್ಷತೆ, ತುರ್ತು ಚಿಕಿತ್ಸಾ ಸೇವೆ, ಟ್ರಾಫಿಕ್ ನಿಯಂತ್ರಣ ಇನ್ನಿತರ ಕಾರ್ಯಗಳನ್ನ ಚಾಚು ತಪ್ಪದೆ ನೀಡಬೇಕಿದೆ. ಆದರೆ ಈ ಯಾವ ಕಾರ್ಯಗಳು ಸಮರ್ಪಕವಾಗದೆ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಿದ್ದು, ಸವಾರರು ಟೋಲ್ ಕಂಪೆನಿಗಳಿಗೆ ಹಿಡಿಶಾಪವನ್ನ ಹಾಕುವಂತಾಗಿದೆ.
ನೆಲಮಂಗಲ ತಾಲೂಕಿನ ಟೋಲ್ ಗಳಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ನಿತ್ಯ ಆಂಬುಲೆನ್ಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಪ್ರತ್ಯೇಕವಾದ ಆಂಬುಲೆನ್ಸ್ ಮಾರ್ಗವನ್ನು ರೂಪಿಸದ ಟೋಲ್ ಅಧಿಕಾರಿಗಳು, ಇದೀಗ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನೆಲಮಂಗಲದ ಜಾಸ್ ಟೋಲ್, ನವಯುಗ ಟೋಲ್ ಹಾಗೂ ಲ್ಯಾಂಕೋ ದೇವಿಹಳ್ಳಿ ಟೋಲ್ ಗಳಲ್ಲಿ ದ್ವಿಚಕ್ರ ವಾಹನ ಸವಾರರ ಜೊತೆ ಆಂಬುಲೆನ್ಸ್ ಗಳು ತೆರಳಲು ತೊಂದರೆ ಪಡುತ್ತಿರುವುದು ಕಾಮನ್ ಆಗಿದೆ. ಅಲ್ಲದೇ ವೀಕೆಂಡ್ ಗಳಲ್ಲಿ ಸಾಲುಗಟ್ಟಿ ನಿಂತ ವಾಹನಗಳಿಂದ ಸವಾರರು ತೊಂದರೆ ಅನುಭವಿಸುತ್ತಾರೆ.
ಟೋಲ್ ಕಂಪನಿಗಳು ಕೇವಲ ಪ್ರತಿನಿತ್ಯ ಲಕ್ಷಗಟ್ಟಲೆ ಹಣಗಳಿಕೆಯಲ್ಲಿ ಮಾತ್ರ ನಿರತರಾಗಿರುತ್ತಾರೆ ಹೊರತು ಸಂಚಾರ ನಿಯಂತ್ರಣ ಮಾಡುವ ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.