ಮಂಡ್ಯ: ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಕೆಟ್ಟುನಿಂತ ಪ್ರಕರಣ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಹೆಬ್ಬೆರೆಳು ಗ್ರಾಮದ ಬೋರಲಿಂಗಯ್ಯ ಮತ್ತು ಕುಮಾರಿ ದಂಪತಿಯ ಪುತ್ರಿ ನಾಲ್ಕು ವರ್ಷದ ಲಾವಣ್ಯ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಕಳೆದೆರೆಡು ದಿನದಿಂದ ಜ್ವರ ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗಿರಲಿಲ್ಲ. ಮಧ್ಯರಾತ್ರಿ ಜ್ವರ ಹೆಚ್ಚಾಗಿದ್ದರಿಂದ ಹೆದರಿದ ಪೋಷಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಆಂಬುಲೆನ್ಸ್ ಬಾಲಕಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದೆ. ಆದರೆ ಆಸ್ಪತ್ರೆ ಇನ್ನೂ ನಾಲ್ಕು ಕಿಲೋಮೀಟರ್ನಷ್ಟು ದೂರವಿರುವಾಗಲೇ ಆಂಬುಲೆನ್ಸ್ ಕೆಟ್ಟುನಿಂತ ಪರಿಣಾಮ ಪೋಷಕರು ಆಟೋದಲ್ಲಿ ಬಾಲಕಿಯನ್ನು ಕರೆದುಕೊಂಡು ಬಂದು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಡ್ಯದಲ್ಲಿ ಸರ್ಕಾರಿ ಆಂಬುಲೆನ್ಸ್ ಗಳು ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಸೆಪ್ಟೆಂಬರ್ 17 ರಂದು ರೋಗಿಯೊಬ್ಬರನ್ನು ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಇಂಡವಾಳು ಗ್ರಾಮದ ಬಳಿ ಕೆಟ್ಟು ನಿಂತಿತ್ತು. ಆಂಬುಲೆನ್ಸ್ ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!