ಮಂಡ್ಯ: ನಟಿ ಸುಮಲತಾ ಗೌಡ್ತಿ ಅಲ್ಲ ಎಂಬ ಎಂಎಲ್ಸಿ ಕೆ.ಟಿ ಶ್ರೀಕಂಠೇಗೌಡ ಅವರ ಹೇಳಿಕೆ ಸದ್ಯ ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷದ ವಿರುದ್ಧ ಅಂಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಈಗಾಗಲೇ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಅಂಬಿ ಅಭಿಮಾನಿಗಳು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಪ್ರತಿಭಟನೆ ಹಾಗೂ ಗಲಾಟೆಗಳ ಬೆನ್ನಲ್ಲೇ ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಯೋರ್ವ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ 5 ನಿಮಿಷ 27 ಸೆಕೆಂಡ್ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ನಾನು ಕೂಡ ಜೆಡಿಎಸ್ ಕಾರ್ಯಕರ್ತ ಎನ್ನುತ್ತ ಕೆ.ಟಿ.ಶ್ರೀಕಂಠೇಗೌಡ, ಎಲ್.ಆರ್ ಶಿವರಾಮೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶಣ್ಣ ಕರ್ನಾಟಕದ ಜನರ ಮನಸ್ಸಿನಲ್ಲಿದ್ದಾರೆ. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂದು ಅವರ ಕುಟುಂಬದ ಬಗ್ಗೆ ಮಾತನಾಡುತ್ತೀರಾ? ಮಂಡ್ಯ ಕ್ಷೇತ್ರದ ಸಂಸದರಾಗಿ ನಿಮಗೆ ನಾಚಿಯಾಗಬೇಕು ಎಂದಿದ್ದಾರೆ.
ಅಲ್ಲದೆ ಅಂಬರೀಶ್ ಅವರ ಬಗ್ಗೆ ಮಾತನಾಡುತ್ತೀರಲ್ಲ, ನೀವು ಮಂಡ್ಯ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೆ ಅನಿತಾ ಕುಮಾರಸ್ವಾಮಿ, ನಿಖಿಲ್, ಪ್ರಜ್ವಲ್ ಸೇರಿದಂತೆ ದೇವೇಗೌಡರ ಕುಟುಂಬದವರ ವಿರುದ್ಧ ಹರಿಹಾಯ್ದಿರುವ ಅಂಬಿ ಅಭಿಮಾನಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv